ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬಳಂಜ ವಲಯಾಧ್ಯಕ್ಷರಾಗಿ ಸಮಾಜ ಸೇವಕರಾದ ಸದಾನಂದ ಸಾಲಿಯಾನ್ ಬಳಂಜ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳಂಜ ಗ್ರಾ.ಪಂ ಉಪಾಧ್ಯಕ್ಷರಾಗಿ, ಪ್ರಗತಿ ಬಂಧು ಒಕ್ಕೂಟ ಬಳಂಜ ಇದರ ಅಧ್ಯಕ್ಷರಾಗಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಜನಜಾಗೃತಿ ವೇದಿಕೆ ಬಳಂಜ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಬಳಂಜ ಬದಿನಡೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿಯ ಅಧ್ಯಕ್ಷರಾಗಿ, ಟೈಲರ್ಸ್ ಅಸೋಸಿಯೇಷನ್ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುವ ಸದಾನಂದ ಸಾಲಿಯಾನ್ ಬಳಂಜರವರು ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯ ಮಟ್ಟದಲ್ಲಿ ದುಶ್ಚಟ ಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದು ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಿಂದ ರಾಜ್ಯಾದ್ಯಂತ ಹಲವಾರು ಮದ್ಯವರ್ಜನ ಶಿಬಿರಗಳನ್ನು ನಡೆಸಿ ಸಾವಿರಾರು ಮದ್ಯ ವ್ಯಸನಿಗಳನ್ನು ಮದ್ಯ ಮುಕ್ತರನ್ನಾಗಿಸಿ ಲಕ್ಷಾಂತರ ಕುಟುಂಬಗಳು ಇಂದು ಮಧ್ಯಪಾನದಂತಹ ವ್ಯಸನದಿಂದ ಹೊರ ಬಂದು ನವಜೀವನವನ್ನು ನಡೆಸಿಕೊಂಡು ಬರುತ್ತಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ.












