ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ರಾಜ್ಯಸಭಾ ಸದಸ್ಯರೂ, ಕರ್ನಾಟಕದ ವಿಧಾನ ಪರಿಷತ್ ನ ಮಾಜಿ ವಿಪಕ್ಷ ನಾಯಕರೂ, ರಾಜಸ್ಥಾನ ಕಾಂಗ್ರೆಸ್ ನ ಉಸ್ತುವಾರಿಗಳೂ,ಕರ್ನಾಟಕದ ರಾಜ್ಯದ ಹಿಂದುಳಿದ ವರ್ಗಗಳಾದ ಈಡಿಗ, ಬಿಲ್ಲವ, ನಾಮಧಾರಿ ಮುಂತಾದ 27 ಉಪಪಂಗಡಗಳ ಮಹಾನ್ ನಾಯಕರು, ಹಾಲಿ ವಿಧಾನ ಪರಿಷತ್ತಿನಲ್ಲಿ ಹೊರಗೆ ಮತ್ತು ಒಳಗೆ ಗಟ್ಟಿ ದ್ವನಿಯ ಅಗ್ರಗಣ್ಯ ನಾಯಕರೂ, ಮಾನ್ಯ ಸಿದ್ದರಾಮಯ್ಯನವರ ಬಳಿಕ ರಾಜ್ಯದ ಹಿಂದುಳಿದ ವರ್ಗಗಳ ಮಹಾನಾಯಕರಾದ ಬಿಕೆ ಹರಿಪ್ರಸಾದ್ ರವರನ್ನು ರಾಜ್ಯದ ಪ್ರಮುಖ ಖಾತೆಯನ್ನು ಒಳಗೊಂಡಂತೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸ್ಥಾಪಕ ಗೌರವಾಧ್ಯಕ್ಷರೂ,ಬೆಳ್ತಂಗಡಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರು,ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಅವರು ಪಕ್ಷದ ರಾಷ್ಟ್ರೀಯ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು ಜಾತ್ಯಾತೀತ ನಿಲುವಿನ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದ ಬಂಟ್ವಾಳ ಮೂಲದ ಬಿ ಕೆ ಹರಿಪ್ರಸಾದ್ ರವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಬಹು ಸಂಖ್ಯಾತರಾದ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಈಗಾಗಲೇ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು, ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ,ಬಿಲ್ಲವ ಬ್ರಿಗೇಡ್ ಮಂಗಳೂರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಆಗ್ರಹಿಸುತ್ತಿದೆ ಎಂದು ತಿಳಿಸಿದರು. ಬಿಕೆ ಹರಿಪ್ರಸಾದ್ ರವರಿಗೆ ಮಾನ್ಯತೆ ನೀಡುವ ಮೂಲಕ ಹಲವಾರು ವರ್ಷಗಳಿಂದ ಸೂಕ್ತ ಪ್ರಾತಿನಿಧ್ಯವಿಲ್ಲದೆ ನಿರ್ಲಕ್ಷಕ್ಕೆ ಒಳಗಾದ ಬಿಲ್ಲವ ಸಮಾಜಕ್ಕೆ ಸಾಮಾಜಿಕ ನ್ಯಾಯದಂತೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಬೇಕೆಂದು ಒತ್ತಾಯಿಸಿದರು.












