ಬೆಳ್ತಂಗಡಿ: ಬೆಳ್ತಂಗಡಿಯಿಂದ ಕೋರ್ಟುಗೆ ಹೋಗುವ ರಸ್ತೆ ಬದಿಯಲ್ಲಿ ಗುಂಡಿಯೊಂದು ನಿರ್ಮಾಣವಾಗಿ ವಾಹನ ಚಾಲಕರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯವನ್ನು ತಂದೊಡಿದ್ದು, ಈ ಗುಂಡಿಯನ್ನು ನಗರ ಪಂಚಾಯತು ಮುಚ್ಚುವ ಕಾಮಗಾರಿ ನಡೆಸಿದೆ.



ಕೋರ್ಟು ರಸ್ತೆಯಲ್ಲಿ ರಸ್ತೆ ಬದಿ ಅಪಾಯಕಾರಿ ಗುಂಡಿ ನಿರ್ಮಾಣವಾಗಿ ಪಾದಾಚಾರಿಗಳಿಗೆ, ವಾಹನ ಚಾಲಕರಿಗೆ ಸಮಸ್ಯೆಯಾಗಿರುವ ಕುರಿತು ಈ ವಾರದ ‘ಸುದ್ದಿ ಉದಯ ಪತ್ರಿಕೆ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ರಸ್ತೆಗೆ ತಾಗಿಕೊಂಡೇ ಈ ಗುಂಡಿ ನಿರ್ಮಾಣವಾಗಿದ್ದು, ವಾಹನಗಳಲ್ಲಿ ಬರುವ ಚಾಲಕರಿಗೆ ಇದು ಪಕ್ಕನೆ ಅರಿಗೆ ಬರುವುದಿಲ್ಲ, ಯಾರೋ ಒಬ್ಬರು ಪುಣ್ಯಮ್ಮರು ಗುಂಡಿ ನಿರ್ಮಾಣವಾದ ಜಾಗದ ಬಳಿ ರಸ್ತೆಯಲ್ಲಿ ಕಲ್ಲೊಂದನ್ನು ಇಟ್ಟು ಇಲ್ಲಿ ಅಪಾಯ ಇದೆ ಎಂಬ ಬಗ್ಗೆ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಈ ರಸ್ತೆಯಲ್ಲಿ ಕೋರ್ಟು, ಸುದೇಮುಗೇರು, ಸಂಜಯನಗರ ಕಡೆ ಪ್ರತಿ ದಿನ ನೂರಾರು

ಸಂಖ್ಯೆಲ್ಲಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೋಗುತ್ತಾರೆ. ಹಲವಾರು ವಾಹನಗಳ ಓಡಾಟ ಇದೆ. ರಸ್ತೆ ಬದಿ ನಿರ್ಮಾಣವಾದ ಈ ಗುಂಡಿ ಬಳಿ ಕಲ್ಲು ಇಟ್ಟಿರುವುದರಿಂದ ಎಲ್ಲರಿಗೂ ಗೊತ್ತಾಗಿದೆ. ಇಲ್ಲವಾದರೆ ಈ ಗುಂಡಿಗೆ ಯಾರಾದರೂ ಬಿದ್ದು ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ನ.ಪಂ ಮಾಜಿ ಹಿರಿಯ ಸದಸ್ಯ ಜಗದೀಶ್ ಡಿ ತಿಳಿಸಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ನಗರ ಪಂಚಾಯತು ಅಧಿಕಾರಿಗಳು ಈಗ ಗುಂಡಿಯನ್ನು ಮುಚ್ಚುವ ಕಾಮಗಾರಿಯನ್ನು ನಡೆಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.












