June 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಮಂಡ್ಯ ಮದ್ದೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ ಗ್ರಾಮಾಡಳಿತಾಧಿಕಾರಿ ಜಯಚಂದ್ರ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗ್ರಾಮಾಡಳಿತಾಧಿಕಾರಿ ಸೇವೆ ಸಲ್ಲಿಸಿ, ಪ್ರಸ್ತುತ ಪುತ್ತೂರು ತಾಲೂಕಿನ ಕೆಮ್ಮಿಂಜೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಯಚಂದ್ರ ಎಂಬವರು ತಮ್ಮ ಊರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಣೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು, ಆತ ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಶೆಟ್ಟಹಳ್ಳಿಯಲ್ಲಿ ನಡೆದಿದೆ.

ಪುತ್ತೂರು ಕೆಮಿಂಜೆ ಗ್ರಾಮ ಆಡಳಿತ ಅಧಿಕಾರಿ ಆಗಿರುವ ಜಯಚಂದ್ರ ಈ ಹಿಂದೆ ಬೆಳ್ತಂಗಡಿ ತಾಲೂಕಿನ ಬಾರ್ಯ, ತೆಕ್ಕಾರು ಗ್ರಾಮದಲ್ಲಿ ವಿ.ಎ.ಆಗಿ ಕರ್ತವ್ಯ ನಿರ್ವಹಿಸಿದ್ದ. ಬೆಳ್ತಂಗಡಿ ಆಡಳಿತ ಸೌಧದದಲ್ಲಿ ಕೇಸ್ ವರ್ಕರ್ ಆಗಿರುವ ವೇಳೆ ೯೪ಅ ಅಕ್ರಮ ಸಕ್ರಮ ದಾಖಲೆಗಳ ಗೋಲ್ ಮಾಲ್ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೂರು ತಿಂಗಳು ಜೈಲಿನಲ್ಲಿದ್ದ ಬಳಿಕ ಪುತ್ತೂರು ತಾಲೂಕಿಗೆ ವರ್ಗಾವಣೆಯಾಗಿದ್ದ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಯ ಶೆಟ್ಟಿಹಳ್ಳಿ ನಿವಾಸಿಯಾಗಿರುವ ಜಯಚಂದ್ರ ಸಂಜೆ ಮನೆ ಸಮೀಪದ ಅಂಗಡಿ ಬಳಿ ಕುಳಿತಿದ್ದ ಗಣೇಶ್(೩೫ವ) ಎಂಬವರನ್ನು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದು, ಹಲ್ಲೆ ನಡೆಸಿದ ಆರೋಪಿ ಗ್ರಾಮ ಆಡಳಿತಾಧಿಕಾರಿ ಜಯಚಂದ್ರ ಪರಾರಿಯಾಗಿದ್ದಾನೆ. ಜೂ.೨೨ರಂದು ರಾತ್ರಿ ವೇಳೆ ಗಣೇಶ್ ಅವರು ತನ್ನ ಮನೆಯ ಸಮೀಪದ ಅಂಗಡಿಯೊಂದರ ಬಳಿ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಜಯಚಂದ್ರ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದನ್ನು ಗಮನಿಸಿದ ಗಣೇಶ್, ಸಾರ್ವಜನಿಕರನ್ನು ಬೈಯ್ಯದಂತೆ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಚಂದ್ರ ಏಕಾಏಕಿ ಗಣೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಗ್ರಾಮಸ್ಥರು ಅಡ್ಡಬಂದು ಅವರಿಬ್ಬರನ್ನೂ ಸಮಾಧಾನಪಡಿಸಿ ಮನೆಗಳಿಗೆ ತೆರಳುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು. ಬಳಿಕ, ಏನೂ ಆಗಿಲ್ಲವೆಂಬಂತೆ ವರ್ತಿಸಿದ್ದ ಜಯಚಂದ್ರ ಅಲ್ಲಿ ಗಣೇಶ್ ಅವರನ್ನು ತಬ್ಬಿಕೊಂಡು ಅಲ್ಲಿಂದ ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಗೆ ಚಿಲಕ ಹಾಕಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ಗಣೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಷಯ ತಿಳಿದ ಸಂಬಂಧಿಕರು ತಕ್ಷಣ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆತಂದಿದ್ದಾರೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ್ ಅವರು ಜೂ.೨೩ರಂದು ಬೆಳಗಿನ ಜಾವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಣೇಶ್ ಅವರ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ನಡೆದ ಸ್ಥಳವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮಹಜರು ನಡೆಸಲಾಯಿತು. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವನ್ನು ನಿಯೋಜಿಸಲಾಗಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಹಾಗೂ ಪಿಐ ಆನಂದ ಅವರು ಕೆ.ಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಬೆಳ್ತಂಗಡಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya

ಹೊಸಪಟ್ಣ: ಶ್ರೀ ಸತ್ಯನಾರಾಯಣ ರಂಗ ಮಂದಿರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ನಿಡ್ಲೆ: ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷರಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya
error: Content is protected !!