ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ ಎಂಬಲ್ಲಿ ಕಾಯ೯ನಿವ೯ಹಿಸುತ್ತಿರುವ ಹಾಟ್ ಮಿಕ್ಸ್ ಮತ್ತು ಕಾಂಕ್ರೀಟ್ ಮಿಶ್ರಣ ಘಟಕಕ್ಕೆ ನವದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗದ ಸೂಚನೆಯಂತೆ ಪುತ್ತೂರು ಎ.ಸಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೂ.30ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು ವಿಭಾಗ ಆಯುಕ್ತರಾದ ಸ್ಟೇಲ್ಲಾ ವರ್ಗಿಸ್ ಸೇರಿದ್ದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.ಈ ಬಗ್ಗೆ ದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗಕ್ಕೆ ಫೆಬ್ರವರಿ ೬ ರಂದು ಪತ್ರ ಬಂದಿದ್ದು ಅದರಂತೆ ಫೆ.೧೭ ರಂದು ಜಿಲ್ಲಾಧಿಕಾರಿಗಳು ಸದ್ರಿ ಸ್ಥಳವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದು ಹಾಗಾಗಿ ಜೂ.೨೩ ರಂದು ಸಹಾಯಕ ಆಯುಕ್ತರು ಸ್ಥಳ ತನಿಖೆಯ ದಿನಾಂಕ ಸೂಚಿಸಿ ನೋಟಿಸ್ ರವಾನಿಸಿದ್ದರು.ಹಾಟ್ ಮಿಕ್ಸ್ ಘಟಕ್ಕೆ ಬೇಟಿ ನೀಡಿದ ಅವರು ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ, ಘಟಕದ ಇರುವ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಘಟಕದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಗ್ರಾ.ಪಂ.ಪಿಡಿಓ ಹಾಗೂ ಗ್ರಾಮಾಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜತ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿರುಪತಿ, ನಡ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ, ಬೆಳ್ತಂಗಡಿ ಉಪ ವಿಭಾಗ ಪಂಚಾಯತ್ ರಾಜ್ ಇಂಜಿನಿರ್ ಇಲಾಖೆ ಎಇಇ ಜರ್ನಾದನ, ಹಾಟ್ ಮಿಕ್ಸ್ ಪ್ಲಾಂಟ್ ಪ್ರಮುಖರು, ಅರ್ಜಿದಾರರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.













