ಉಜಿರೆಯ NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇಶ ಕಂಡ ಅಪ್ರತಿಮ ವೈದ್ಯ ಡಾ. ಬಿ.ಎಸ್.ರಾಯ್ ಅವರ ಸ್ಮರಣಾರ್ಥ ಜು. 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಮತ್ತು ಅಳದಂಗಡಿ ಪರಿಸರದಲ್ಲಿ ಮನೆ ಮಾತಾಗಿರುವ ವೈದ್ಯರಾದ ಡಾ.ಎನ್ ಎಮ್ ತುಳಪುಳೆ ಅವರನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತೀ ದಂಪತಿಗಳು ಶಾಲು ಹೊದಿಸಿ , ಫಲಪುಷ್ಪ ನೀಡಿ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಡಾ. ಎನ್ ಎಮ್ ತುಳಪುಳೆಯವರು ಕಳೆದ 26 ವರ್ಷಗಳಿಂದ ಬೆನಕ ಆಸ್ಪತೆಯ ಕಾರ್ಯವೈಖರಿ ಮತ್ತು ನಿಸ್ಪ್ರಹ ಸೇವೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು ,ಬೆನಕ ಆಸ್ಪತ್ರೆ ರೋಗಿಗಳ ಪಾಲಿನ ಸಂಜೀವಿನಿ ಎಂದರೆ ಅತಿಶಯೋಕ್ತಿಯಲ್ಲ. ಈ ಆಸ್ಪತ್ರೆ ಇನ್ನೂ ಎತ್ತರಕ್ಕೆ ಬೆಳೆದು ಬೆಳ್ತಂಗಡಿ ತಾಲೂಕಿಗಷ್ಟೇ ಅಲ್ಲ ,ಸುತ್ತಲಿನ ಪರಿಸರದ ರೋಗಿಗಳಿಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು .
ಡಾ. ಗೋಪಾಲಕೃಷ್ಣರವರು ಮಾತನಾಡುತ್ತ ಕೇವಲ 7 ಹಾಸಿಗೆಗಳಿಂದ ಪ್ರಾರಂಭಿಸಿದ ನಮ್ಮ ಬೆನಕ , ಪ್ರಸ್ತುತ 130 ಹಾಸಿಗೆಗಳನ್ನು ಹೊಂದಿದ್ದು , ಇದು ಕೇವಲ ನನ್ನೊಬ್ಬನ ಸಾಧನೆಯಲ್ಲ , ಇದು ನಮ್ಮ ತಾಲೂಕಿನ ಮತ್ತು ಸುತ್ತಲಿನ ಪರಿಸರದ ಬಂಧುಗಳು, ತಾಲೂಕಿನ ವೈದ್ಯರುಗಳು , ನನ್ನ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಪ್ರೋತ್ಸಾಹ ಮತ್ತು ಸಹಕಾರ ಇವೆಲ್ಲವುಗಳಿಂದ ಸಾಧ್ಯವಾಯಿತೆಂದು ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು .
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಹ್ವಾನದ ಮೇರೆಗೆ ಪಾಲ್ಗೊಂಡ ಎಲ್ಲ ವೈದ್ಯರುಗಳಿಗೆ ಹೂ ನೀಡಿ ಗೌರವಿಸಲಾಯಿತು .
ಇದೇ ಸಂದರ್ಭದಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ಪೀಡಿತ ಮತ್ತು ಪ್ಲೇಟ್ಲೆಟ್ ಅತ್ಯಂತ ಕಡಿಮೆಯಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ನಿಡ್ಲೆ ಗ್ರಾಮದ ಕರಿಯ ( 50ವರ್ಷ ) ಇವರಿಗೆ ಈ ವರ್ಷದ ಉಚಿತ ಚಿಕಿತ್ಸೆಯನ್ನು ಆಸ್ಪತ್ರೆಯ ವತಿಯಿಂದ ನೀಡಲಾಗುವುದೆಂದು ವೈದ್ಯಕೀಯ ನಿರ್ದೇಶಕರು ಪ್ರಕಟಿಸಿದರು.
ಡಾ. ಅಂಕಿತ ಜಿ ಭಟ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಡಾ.ಆದಿತ್ಯ ರಾವ್ ರವರು ಡಾ.ಎನ್ ಎಂ ತುಳಪುಳೆಯವರ ಪರಿಚಯವನ್ನು ಮಾಡಿದರು . ಡಾ.ಭಾರತಿ ಜಿ ಕೆ ವಂದಿಸಿದರು.













