ಬೆಳ್ತಂಗಡಿ: ಮಂಗಳೂರು ಕಡೆಯವರು ಒಕ್ಕಲಿಗರೇ ಅಲ್ಲ ಎಂಬ ಶಾಸಕ ಯಸ್.ಆರ್. ವಿಶ್ವನಾಥರವರ ಅಪ್ರಭುದ್ದ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರು ಕಡೆಯವರು ಒಕ್ಕಲಿಗರೇ ಅಲ್ಲ ಎಂಬ ಹೇಳಿಕೆ ಶುದ್ಧ ಮೂರ್ಖತನದ್ದಾಗಿದ್ದು ಇತಿಹಾಸದ ಜ್ಞಾನ ಇಲ್ಲದ ಒಬ್ಬ ವ್ಯಕ್ತಿಯ ಹೇಳಿಕೆಯಾಗಿರುತ್ತದೆ. ಈ ಹೇಳಿಕೆಯಿಂದ ಅವರ ತಿಳುವಳಿಕೆಯ ಕೊರತೆಯನ್ನು ಸಮಾಜದ ಮುಂದೆ ಬಹಿರಂಗ ಪಡಿಸಿದಂತಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಕ್ಷೇತ್ರದ ಹಾಗೂ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಸಂಕುಚಿತ ಮನಸ್ಥಿತಿಯ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ. ತಮ್ಮ ರಾಜಕೀಯ ದ್ವೇಶವನ್ನು ತೀರಿಸಿಕೊಳ್ಳಲು ಈ ರೀತಿಯ ಅನುಚಿತ ತಂತ್ರವನ್ನು ಬಳಸಿರುವುದು ಅವರ ದುಷ್ಟತನದ ಮುಖವನ್ನು ಅನಾವರಣಗೊಳಿಸಿದಂತಾಗಿದೆ. ಬ್ರಿಟಿಷರ ವಿರುದ್ಧ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಮುಂಚೆ (1837ರಲ್ಲಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಗೌರವಕ್ಕೆ ಧಕ್ಕೆ ತರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಗೌಡರ ಇತಿಹಾಸವನ್ನು ತಿಳಿಯದೆ ಕೊಟ್ಟಿರುವ ಹೇಳಿಕೆ ದುರುದ್ದೇಶದಿಂದ ಕೂಡಿದ್ದು ಈ ಬಗ್ಗೆ ಕೂಡಲೇ ಬಹಿರಂಗ ಕ್ಷಮೆಯಾಚಿಸುವಂತೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಆಗ್ರಹ ಪಡಿಸುತ್ತದೆ. ತಪ್ಪಿದಲ್ಲಿ ಪ್ರತಿಭಟನೆಯನ್ನು ಮಾಡಲಾಗುವುದು ತಿಳಿಸಿದ್ದಾರೆ.













