ಉಜಿರೆ: ಮಕ್ಕಳನ್ನು ಪ್ರೋತ್ಸಾಹಿಸುವುದು ಹೆಮ್ಮೆಯ ವಿಚಾರ. ಇಂತಹ ಪ್ರೇರಣೆಯಿಂದ ಬೆಳವಣಿಗೆ ಸಾಧ್ಯ. ಯುವಜನತೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬೆಳೆಯ ಬೇಕಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ ದಲ್ಲಿ ಜು.2ರಂದು ಜರುಗಿದ ಎನ್.ಎಸ್ ಗೋಖಲೆ ಸಂಸ್ಕರಣಾ ವಿದ್ಯಾನಿಧಿ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎನ್.ಎಸ್. ಗೋಖಲೆ ಸಹಕಾರಿ ಕ್ಷೇತ್ರಕ್ಕಾಗಿ ತಪಸ್ಸು ಮಾಡಿದವರು. ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಇಂದು ದೇಶದಲ್ಲಿ 8.50 ಲಕ್ಷ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 30 ಕೋಟಿ ಜನ ಸಹಕಾರಿ ಸಂಘದ ಸದಸ್ಯರಾಗಿದ್ದು, ಸಹಕಾರಿ ಸಂಸ್ಥೆಗಳು ಬಲಯುತವಿದ್ದ ಕಾರಣ ಗೌರವಯುತ ಜೀವನ ವ್ಯವಸ್ಥೆ ನಡೆಸುವಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಪ್ರಕಾಶ ನಾರಾಯಣ ಮಾತನಾಡಿ, ಶಿಕ್ಷಣ ಎಂಬುದು ಪೋಷಕರಿಗೆ ಹೊರೆಯಾಗ ಬಾರದು. ಈ ಉದ್ದೇಶದಿಂದ ಸಂಘದ ವತಿಯಿಂದ ರಿಯಾಯಿತಿ ಬಡ್ಡಿ ದರದಲ್ಲಿ ಸದಸ್ಯರ ಮಕ್ಕಳಿಗೆ ಶಿಕ್ಷಣ ಸಾಲವನ್ನು ನೀಡಲಾಗುತ್ತಿದೆ ಎಂದರು.
ಸನ್ಯಾಸಿಕಟ್ಟೆ ಶ್ರೀಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಗೋಖಲೆ ಶುಭಹಾರೈಸಿದರು.
ಕ್ಯಾಂಪ್ಕೊ ಕೃಷಿ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಎನ್.ಆರ್., ಡಿಜಿಎಂ ಗೋವಿಂದ ಭಟ್, ಜಿಲ್ಲಾ ಸಹಕಾರ ಯೂನಿಯನ್ ವಿ.ಹಿರೇಮಠ, ಸಂಘದ ನಿರ್ದೇಶಕರಾದ ವೆಂಕಟೇಶ್ವರ ಭಟ್, ಶಶಿಧರ ಕಲ್ಮಂಜ, ರಾಘವ ಕಲ್ದಂಜ, ಶಿವಪ್ರಸಾದ್ ಗೌಡ, ರವಿ ಪೂಜಾರಿ, ಅಜಯ್ ಕೆ.ಎ., ಅಶ್ವಿನಿ ಎ. ಹೆಬ್ಬಾರ್, ವೃತ್ತಿಪರ ನಿರ್ದೇಶಕರಾದ ನಾರಾಯಣ ಫಡಕೆ, ಬಾಬು ಗೌಡ ಉಪಸ್ಥಿತರಿದ್ದರು.
ಉಪಾಧ್ಯಕ್ಷ ರಾಘವ ಗೌಡ ಕೆ. ಸ್ವಾಗತಿಸಿದರು. ನಿರ್ದೇಶಕ ಚೆನ್ನಕೇಶವ ನಾಯ್ಕ ಮತ್ತು ಸಿಇಒ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸುಷ್ಮಾ ಹಾಗೂ ಅಶ್ವಿನ್ ನವಾಥೆ ವಿದ್ಯಾರ್ಥಿಗಳ ಪರಿಚಯ ನೀಡಿದರು.














