
ಮಚ್ಚಿನ : ಸ.ಉ.ಪ್ರಾ. ಶಾಲೆ ಮಚ್ಚಿನ ಇಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ ಇವರ ಸಿಎಸ್ ಆರ್ ನಿಧಿಯ ಸಹಕಾರದಿಂದ ನಿರ್ಮಿಸಲಾದ 2 ತರಗತಿ ಕೊಠಡಿಗಳು, ತಾ.ಪಂ. ಅನುದಾನದಲ್ಲಿ ನಿರ್ಮಿಸಿದ ಗ್ರಂಥಾಲಯ ಕೊಠಡಿ ಹಾಗೂ ರಾಜ್ಯ ಸಭಾ ಸದಸ್ಯರು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ ಮಂಜೂರುಗೊಂಡ ಸ್ಮಾರ್ಟ್ ಬೋರ್ಡ್ ನ ಉದ್ಘಾಟನಾ ಸಮಾರಂಭವು ಜು.7ರಂದು ನಡೆಯಿತು.

ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ರವರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಹಾಗೂ ಶಾಲೆಗಳಲ್ಲಿ ಕಲಿಯುತ್ತಿರುವ ಗ್ರಾಮೀಣ ಮಕ್ಕಳ ಶಿಕ್ಷಣದ ಗುಣಮಟ್ಟವೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಡಾ. ರಾಜರ್ಷಿ ಬಿ., ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಹರೀಶ್ ಕುಮಾರ್, ಹರ್ಷ ಸಂಪಿಗೆತ್ತಾಯ, ನಾಮನಿರ್ದೇಶಿತ ಸದಸ್ಯರಾದ ಪ್ರಮೋದ್ ಕುಮಾರ್, ಸೃಷ್ಟಿ ಕನ್ಸಷ್ಟ್ರನ್ ಇಂಜಿನಿಯರ್ ರಾದ ಯತೀಶ್ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಮೇಲ್ವಿಚಾರಕರಾದ ಕೇಶವ ನಾಯ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಕೆ. , ಊರ ವಿದ್ಯಾಭಿಮಾನಿಗಳು, ಪೋಷಕರು, ವಿದ್ಯಾರ್ಥಿಗಳು, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.















