ಗುರುವಾಯನಕೆರೆ: ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜ ಮತ್ತು ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ‘ತುಳು ಬಾಸೆ, ಸಾಹಿತ್ಯ ಬೊಕ್ಕ ಸಂಸ್ಕೃತಿ’ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವು ಇಂದು ಜುಲೈ 9 ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕಿ ಪ್ರೊ. ತ್ರಿಶಲಾ ಜೈನ್ ಕೆ.ಎಸ್. ಅವರು ದೀಪ ಬೆಳಗಿಸಿ , ಭತ್ತ ತುಂಬಿದ ಕಳಸೆಯಲ್ಲಿ ಹಿಂಗಾರ ಅರಳಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು,ತುಳು ಭಾಷೆ ಮತ್ತು ಸಂಸ್ಕೃತಿಯು ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ನಮ್ಮ ಮೂಲ ಪರಂಪರೆಯನ್ನು ಪರಿಚಯಿಸುವ ಮತ್ತು ಅದನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಸುಮಂತ್ ಕುಮಾರ್ ಜೈನ್ ಬಿ. ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯದ ಬೋಧನೆಗೆ ಸೀಮಿತವಾಗಬಾರದು. ಪ್ರಾದೇಶಿಕ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಾಂತಿ ಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ದ್ವಿತೀಯ ಹಂತದಲ್ಲಿ ನಡೆದ ವಿಚಾರಗೋಷ್ಠಿಗಳಲ್ಲಿ, ಪ್ರಸಿದ್ಧ ತುಳು ಸಂಶೋಧಕರಾದ ಡಾ. ಯಶುಕುಮಾರ್ ಡಿ. ಅವರು ‘ತುಳು ಭಾಷೆ ಮತ್ತು ಸಾಹಿತ್ಯ’ದ ಕುರಿತು ಹಾಗೂ ಖ್ಯಾತ ತುಳು ವಿದ್ವಾಂಸರಾದ ದಯಾನಂದ ಜಿ. ಕತ್ತಲ್ಸಾರ್ ಅವರು ‘ತುಳು ಸಂಸ್ಕೃತಿ’ಯ ವಿಶಿಷ್ಟತೆಯ ಕುರಿತು ವಿಶೇಷ ಉಪನ್ಯಾಸ ನೀಡಿ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.
ಶ್ರೀ ಧ ಮಂ ತುಳು ಪೀಠದ ಸಲಹಾ ಸಮಿತಿ ಪದಾಧಿಕಾರಿಗಳಾದ ರಾಜಶ್ರೀ ಹೆಗ್ಡೆ ಕಣಿಯೂರು ಗುತ್ತು ಸ್ವಾಗತಿಸಿದರು. ತುಳು ಪೀಠದ ಸಂಯೋಜಕರಾದ ಪ್ರಸಾದ್ ಅಂಚನ್ ವಂದಿಸಿದರು. ಉಪನ್ಯಾಸಕರಾದ ವೈಷ್ಣವಿ ಹಾಗೂ ಶಿಕ್ಷಕರಾದ ಚಂದ್ರಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು , ಶಾಂತಿಶ್ರೀ ಜೈನ ಮಹಿಳಾ ಸಮಾಜದ ಸದಸ್ಯರು , ಸ್ಥಳೀಯರು ಭಾಗವಹಿಸಿದರು.















