
ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್ ಶಾಖೆಯ ಉದ್ಘಾಟನಾ ಸಮಾರಂಭ ಜು. 13ರಂದು ಉರ್ವ ಮಾರಿಗುಡಿ ಸಮೀಪದ ಎಂ.ಎಸ್.ಸಿ.ಎಲ್ ಇಂಡೋರ್ ಸ್ಟೇಡಿಯಂ ಬಿಲ್ಡಿಂಗ್ನಲ್ಲಿ ಉದ್ಘಾಟನೆಗೊಂಡಿತು.
ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಸ್ಥಳಾಂತರಿತ ಶಾಖೆ ಉದ್ಘಾಟಿಸಿ ಮಾತನಾಡಿ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳ ಸೇವೆ ಶ್ಲಾಘನೀಯ. ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್ ಸೊಸೈಟಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕೇಸರ ಲಕ್ಷ್ಮಣ ಅಮೀನ್ ಕೋಡಿಕಲ್ ಮಾತನಾಡಿ, ಸೊಸೈಟಿಯ ಆರಂಭವಾಗಿ ಲಾಭದ ಹಾದಿಯಲ್ಲಿ ಅದನ್ನು ಮುನ್ನಡೆಸಿ 21 ಶಾಖೆಗಳನ್ನು ಸ್ಥಾಪಿಸುವುದು ದೊಡ್ಡ ಸಾಧನೆ. ಇದರಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು, ಸಿಬ್ಬಂದಿಗಳ ಶ್ರಮ ಸಾಕಷ್ಟಿದೆ. ಯಶಸ್ಸು ಸಿಗಬೇಕಾದರೆ ಅದರ ಹಿಂದೆ ದೊಡ್ಡ ಶ್ರಮ ಬೇಕು. ಅದನ್ನು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯವರು ಮಾಡಿ ತೋರಿಸಿದ್ದಾರೆ. ಮುಂದೆಯೂ ಈ ಸೊಸೈಟಿಯು ಜನರಿಗೆ ಉತ್ತಮ ಸೇವೆ ಕೊಡಲಿ ಎಂದು ಹಾರೈಸಿದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಸ್ ಜಯರಾಮ್ ಶೆಟ್ಟಿ ಮಾತನಾಡಿ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಇಂದು ಬೃಹದಾಕಾರವಾಗಿ ಬೆಳೆದಿದೆ. ರಾಜ್ಯದಲ್ಲೇ ಪ್ರತಿಷ್ಟಿತ ಸಂಸ್ಥೆಯಾಗಿ ಬೆಳೆದಿದೆ. ಇನ್ನೊಂದು ಒಂದು ವರ್ಷದಲ್ಲಿ 1000 ಕೋಟಿ ರೂ. ವ್ಯವಹಾರ ದಾಖಲಿಸುವ ವಿಶ್ವಾಸವಿದೆ. ಈ ಮಟ್ಟಿಗೆ ಬೆಳೆಯಬೇಕಾದರೆ ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ನಿಷ್ಠೆ, ನಿಷ್ಪಕ್ಷಪಾತ, ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಿದ್ದರಿಂದ ನಮ್ಮ ಸಂಸ್ಥೆಯು ಸ್ವಲ್ಪ ಕಾಲದಲ್ಲೇ ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ. ಜನರಿಗೆ ನಮ್ಮ ಮೇಲೆ ಅಪಾರ ವಿಶ್ವಾಸವಿದೆ. ವಿದ್ಯಾವಂತ ಜನ ನಮ್ಮನ್ನು ಹುಡುಕಿಕೊಂಡು ಬಂದು ವ್ಯವಹಾರ ಮಾಡುಲು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಗೆ ಸ್ವಂತ ಕಟ್ಟಡ ಆಗಲಿದೆ. ಮಂಗಳೂರಿನ ಅತ್ತಾವರ ಹಾಗೂ ಉಡುಪಿ ಜಿಲ್ಲೆಯ ಕಾಪುವಿನಲ್ಲೂ ಸಂಘದ ಶಾಖೆ ಆರಂಭ ಆಗಲಿದೆ ಎಂದು ಹೇಳಿದರು.
ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೋರ್ಯಾರು ಮಾತನಾಡಿ, ಮುಂದಿನ ಒಂದೂವರೆ ವರ್ಷದಲ್ಲಿ 1000 ಕೋಟಿ ರೂ. ವ್ಯವಹಾರ ದಾಖಲಿಸುವ ಗುರಿ ಹೊಂದಲಾಗಿದೆ. ಈ ಭಾಗದಲ್ಲೂ ಉತ್ತಮ ವ್ಯವಹಾರಕೆ ಗ್ರಾಹಕರು ಸಹಕಾರ ಕೊಡಬೇಕು ಎಂದರು. ಸೊಸೈಟಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕೆ, ನಿರ್ದೇಶಕರಾದ ಎಸ್.ಜಯರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್, ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ ಎ, ಜಯರಾಮ್ ಭಂಡಾರಿ, ಕೃಷ್ಣ ರೈ ಟಿ., ಎಂ.ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಸಾರಿಕಾ ಶೆಟ್ಟಿ, ವಿಜಯ ಬಿ.ಶೆಟ್ಟಿ, ಶಾಖಾ ಪ್ರಬಂಧಕರಾದ ದಿನಕರ ರೈ ಡಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಸಂಘದ ನಿರ್ದೇಶಕ ರಘುರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಇಒ ಸುಜಯ್ ಶೆಟ್ಟಿ ವಂದಿಸಿದರು.















