ಉಜಿರೆ : ಬದಲಾದ ಕಾಲಘಟ್ಟದಲ್ಲಿ ಹಲವಾರು ಯೋಜನೆ ಮತ್ತು ವ್ಯವಸ್ಥೆಗಳು ನಮಗೆ ತಲುಪುತ್ತಿವೆ. ನಾವೆಲ್ಲ ವಿದ್ಯಾವಂತರಾಗಿದ್ದೇವೆ. ಇಂತಹ ಪ್ರಬುದ್ಧತೆಯ ನಡುವೆ ಬೆಳೆದು ಬಂದ ಹಾದಿಯನ್ನು ಮರೆಯುವ ಕೀಳರಿಮೆ ನಮ್ಮಲ್ಲಿ ಬೆಳೆಯಬಾರದು. ವಿದ್ಯಾವಂತರು ವಿಚಾರವಂತರಾಗುವುದರ ಜೊತೆಗೆ ಆಚಾರವಂತರಾಗಿ ಬದುಕಬೇಕು. ಕಲಿತ ವಿದ್ಯೆ ಆಚಾರವಾಗಿ ಮೂಡಿ ಬಂದಾಗ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಭಾಂಗಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್(ರಿ) ವತಿಯಿಂದ ಕರ್ನಾಟಕದಾದ್ಯಂತ ಅರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಮಾಡುವ ಬೃಹತ್ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.
ಸ್ಕಾಲರ್ಶಿಪ್ ವಿತರಣೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆರ್ಥಿಕವಾಗಿ ಸ್ಪಂದಿಸುವ ಸಮಯೋಚಿತ ಯೋಜನೆ. ಕ್ಷೇತ್ರವು ವಿದ್ಯಾರ್ಥಿಗಳ ಸಹಾಯಕ್ಕಾಗಿ ಸದಾ ನೆರವು ಮತ್ತು ಸಹಕಾರವನ್ನು ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಪೋಷಕ ಆರ್ಥಿಕ ಒತ್ತಡವನ್ನು ಸುಧಾರಿಸಲೂ ಅನುವು ಮಾಡಿಕೊಟ್ಟಿದೆ. ಈ ಯೋಜನೆಯ ಲಾಭ ಅರ್ಹ ವಿದ್ಯಾರ್ಥಿಗಳೆ ನೇರವಾಗಿ ಪಡೆದುಕೊಳ್ಳುತ್ತಿರುವುದು ವಿಶೇಷ. ಸಾವಿರಾರು ವಿದ್ಯಾರ್ಥಿಗಳು ಇಂತಹ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬದುಕಿನದ್ದಕ್ಕೂ ತಮ್ಮ ಬೆಳವಣಿಗೆಗೆ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದ ಸಂಸ್ಥೆಯ ಮೇಲಿನ ಕೃತಜ್ಞತಾ ಭಾವವನ್ನು ಮರೆಯಬಾರದು.

ಕ್ಷೇತ್ರವು ರಾಜ್ಯಾದ್ಯಂತ 56 ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣವನ್ನು ಹಲವು ದಶಕಗಳಿಂದ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ಜವಾಬ್ದಾರಿಯುತ ಯುವ ಸಮುದಾಯ ನಾವಾದಾಗ ನಕರಾತ್ಮಕ ಚಿಂತನೆಗಳು ನಮ್ಮ ಬಳಿ ಸುಳಿಯುವುದಿಲ್ಲ. ಯುವ ಸಮುದಾಯ ಮಾದಕ ವ್ಯಸನದ ರುಚಿ ಹತ್ತಿಸುವವರ ಬಗ್ಗೆ ಎಚ್ಚರವಾಗಿರಬೇಕು. ಯುವಶಕ್ತಿಗಳನ್ನು ಸಮಾಜದ ಆಸ್ತಿಗಳಾಗಿ ಬೆಳಗಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸೇರಿದಂತೆ ಶೈಕ್ಷಣಿಕ ಸಂಯೋಜಿತರಾದ ಪ್ರೋ. ಎಸ್. ಎನ್ ಕಾಕತ್ಕಾರ್ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ್ ಟಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಂಸ್ಥೆಯ ಶೈಕ್ಷಣಿಕ ಸಂಯೋಜಿತರಾದ ಪ್ರೋ. ಎಸ್. ಎನ್ ಕಾಕತ್ಕಾರ್ ಸ್ವಾಗತಿಸಿ, ಪ್ರಾಸ್ತವಿಕ ಮಾತಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ನಫಿಸತ್ ನಿರೂಪಿಸಿ, ಡೀನ್ ಸೌಮ್ಯ ಬಿ.ಪಿ ವಂದಿಸಿದರು.















