ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘ ಮಡಂತ್ಯಾರು ಇದರ ವಾರ್ಷಿಕ ಮಹಾಸಭೆಯು ಮಡಂತ್ಯಾರು ಗ್ರಾಮ ಪಂಚಾಯತ್ ವಠಾರದಲ್ಲಿ ಜು.19ರಂದು ನಡೆಯಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ನಿರ್ವಹಿಸಿದರು. ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾ ರು, ನಿತ್ಯಾನಂದ ಹೆಗ್ಡೆ ಬಿ. ಹಾಗೂ ಎಲ್ಲಾ ನಿರ್ದೇಶಕರು, ಗೌರವ ಸಲಹೆಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಸಿಇಓ ಅವರು ಸವಿಸ್ತಾರವಾಗಿ ಬ್ಯಾಂಕಿನ ಆಯವ್ಯಯ ಪಟ್ಟಿಯನ್ನು ಮಂಡಿಸಿ ಆಡಳಿತ ಮಂಡಳಿ ನಿರ್ಧರಿಸಿದಂತೆ ಶೇ. 12 ಡಿವಿಡೆಂಡ್ ಸದಸ್ಯರಿಗೆ ಲಾಭಾಂಶದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಸಹಕಾರಿ ಭೀಷ್ಮ ಮೋನಪ್ಪ ಪೂಜಾರಿ ಕಂಡೆತ್ಯಾರು ಸಂಘದ ಯಶಸ್ಸಿನ ಕುರಿತು ಮಾತಾಡಿ ವರ್ತಕರ ಸಂಘದಿಂದ ಪ್ರಾರಂಭಗೊಂಡಂತಹ ಸಹಕಾರಿ ಸಂಘ ಕೇವಲ 3 ವರ್ಷದಲ್ಲಿ ಅದ್ಭುತವಾದ ಸಾಧನೆಯೊಂದಿಗೆ 50 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಘವು ಎಲ್ಲಾ ರೀತಿಯಲ್ಲಿಯೂ ಬಲಿಷ್ಠವಾಗಿರುವ ಬಗ್ಗೆ ಪ್ರಶಂಸೆಯನ್ನು ನುಡಿದು ಶುಭ ಹಾರೈಸಿದರು.
ಮಹಾಸಭೆಯಲ್ಲಿ ವರ್ತಕ ಸಾಧಕರಾದ ಆನ್ ಬಾಲ್ ಚಿಕ್ಕಿ ಸಕಲೇಶಪುರ ಇದರ ಮಾಲಕರಾದ ರವಿತೇಜ ಬಳ್ಳಮಂಜ, ಹೋಟೆಲ್ ಉದ್ಯಮದಲ್ಲಿ ಬಹಳಷ್ಟು ಸಾಧನೆ ಮಾಡಿರುವ ಅನಿಶ್ ಕೊರೆಯ ಮಡಂತ್ಯಾರು, ಗಾರ್ಮೆಂಟ್ಸ್ ವ್ಯವಹಾರದಲ್ಲಿ ಸಾಧನೆ ಮಾಡಿರುವ ಶ್ರೀಮತಿ ಸಮೀರ ಸಿದ್ದಿಕ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಪರಿಸರದ ಶಾಲಾ-ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಧನ ಸಹಾಯದೊಂದಿಗೆ ಗೌರವ ಸಲ್ಲಿಸಲಾಯಿತು. ಸಂಘದ ಸದಸ್ಯರ ಮಕ್ಕಳಲ್ಲಿ 95% ಗಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.

ಸಭಾಧ್ಯಕ್ಷತೆಯನ್ನು ವಿಶಿಷ್ಟ ರೀತಿಯಲ್ಲಿ ನಿರ್ವಹಿಸಿದ ಸಂಘದ ಅಧ್ಯಕ್ಷ ಜಯಂತ ಶೆಟ್ಟಿಯವರು ಮಾತಾಡಿ ಸಂಘದ ಅಭಿವೃದ್ಧಿಯ ಬಗ್ಗೆ ಸಹಕರಿಸುತ್ತಿರುವ ಎಲ್ಲಾ ಗ್ರಾಹಕರನ್ನು ಮನದುಂಬಿ ವಂದಿಸಿದರು. ಅರ್ಥಪೂರ್ಣವಾಗಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀಮತಿ ಅಮಿತಾ ಪ್ರಿಯಾ ಲೋಬೊ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಯೋಗೇಶ್ ಪೂಜಾರಿ ಕಡ್ತಿಲ ವಂದಿಸಿದರು. ಸಂಘದ ನಿರ್ದೇಶಕರಾದ ತುಳಸಿದಾಸ್ ಪೈ, ಕಿಶೋರ್ ಶೆಟ್ಟಿ ಮೂಡಯೂರು, ಶ್ರೀಮತಿ ಡಿಗ್ನ ಮೋರಾಸ್ ಕಾರ್ಯಕ್ರಮ ನಿರೂಪಿಸಿದರು. ಆಟಿ ತಿಂಗಳ ವಿಶೇಷ ಖಾದ್ಯಗಳ ಭೋಜನದೊಂದಿಗೆ ಸಭೆ ಸಂಪನ್ನಗೊಂಡಿತು.















