ಶಿಶಿಲ: ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬದಿಗುಡ್ಡೆ ಎಂಬಲ್ಲಿ ಕಪಿಲಾ ನದಿ ಬಳಿಗೆ ತೆರಳಿದ ಯುವಕರಿಗೆ ನದಿಯ ಮಧ್ಯೆ ವ್ಯಕ್ತಿಯೋರ್ವರು ನಿಂತಿರುವುದು ಕಂಡು ಬಂದಿದ್ದು ಧಾರಾಕಾರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯವನ್ನರಿತು ಸ್ಥಳೀಯ ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ತೆರಳಿದ ಸ್ವಯಂ ಸೇವಕರಾದ ರಾಧಾಕೃಷ್ಣ ಗುತ್ತು ಹಾಗೂ ರಮೇಶ ಬೈರಕಟ್ಟ ಸ್ಥಳೀಯ ಪರಿಣತ ಈಜುಗಾರರಾದ ಮೋಹನ ಗೌಡ ಬದ್ರಿಜಾಲು ಇವರ ಜೊತೆ ತೆರಳಿದಾಗ ಶಿಶಿಲೇಶ್ವರ ದೇಗುಲದ ಕಿಂಡಿ ಅಣೆಕಟ್ಟಿನಿಂದ ಸುಮಾರು ಒಂಬೈನೂರು ಮೀಟರ್ ಕೆಳಗೆ ರಭಸವಾಗಿ ಹರಿಯುತ್ತಿದ್ದ ಕಪಿಲೆಯ ಎರಡು ಕವಲುಗಳ ಮಧ್ಯೆ ಅಂದಾಜು ಎಪ್ಪತ್ತು ವರ್ಷದ ವೃದ್ದರೋರ್ವರು ಕಂಗಾಲಾಗಿ ನಿಂತಿರುವುದನ್ನು ಗಮನಿಸಿದರು.
ಅವರಿಗೆ ಧೈರ್ಯ ತುಂಬಿ ಜೀವರಕ್ಷಕ ಜಾಕೆಟ್ ತೊಡಿಸಿ ಜೀವರಕ್ಷಕ ಹಗ್ಗದ ಸಹಾಯದಿಂದ ತಮ್ಮ ಜೊತೆಯಲ್ಲಿಯೇ ವೃಧ್ದರನ್ನು ಸುರಕ್ಷಿತವಾಗಿ ದಡ ತಲುಪಿಸಿದರು.
ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸದಸ್ಯರಿಗೆ ಕ್ಷೇತ್ರದ ವತಿಯಿಂದ ಅಡ್ಯನಡ್ಕದ ವಾರಾಣಾಶಿ ಫಾರ್ಮ್ ಕೊಳದಲ್ಲಿ ಅಂತರ್ರಾಷ್ಟ್ರೀಯ ಮುಳುಗು ತಜ್ಞ ನೆದರ್ಲೆಂಡ್ಸ್ ನ ಜೆರೋಮ್ ಇವರಿಂದ ಈಜು ಹಾಗೂ ಆಳ ಮುಳುಗುವಿಕೆ ತರಬೇತಿ ನಡೆದಿರುವುದನ್ನು ಸ್ಮರಿಸಬಹುದಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ ರೂಪೇಶ್ ಬೈಪಾಡಿ,ದಿನೇಶ್ ಬದಿಗುಡ್ಡೆ ಹಾಗೂ ಇನ್ನಿತರರು ಸಹಕರಿಸಿದರು.
















