ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಮಣಕೀಕರ್ ‘ಯೋಗೇಂದ್ರನಾಥ ಶರ್ಮಾ ಅರುಣ್ ಕೆ ಸತಸಯಿ ಔರ್ ಬಿಹಾರಿ ಸತಸಯಿ ಕಾ ತುಲನಾತ್ಮಕ ಅಧ್ಯಯನಕ್ಕೆ ಚೆನೈನ
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಸಭಾದ ಪ್ರಭಾರ ಕುಲಸಚಿವರು ಹಾಗು ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಎನ್. ಅಂಬಿಗ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಮಹಾ ಪ್ರಬಂಧಕ್ಕೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಇವರ ಸಂಶೋಧನಾ ವಿಷಯಕ್ಕೆ ಸಂಬಂಧಿತ ಲೇಖನಗಳು ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ್ದಾರೆ. ಇವರ ಯೋಗೇಂದ್ರನಾಥ್ ಶರ್ಮಾ ಅರುಣ್ ಕೆ ಸತಸಯಿ ಔರ್ ಬಿಹಾರಿ ಸತಸಯಿ ಮೆ ಚಿತ್ರಿತ ನೀತಿ ತತ್ವ ಮತ್ತು ಸತಸಯಿ ಮೆ ಚಿತ್ರಿತ ಭಾರತೀಯ ಪರಂಪರಾ ಎಂಬ ಎರಡು ಲೇಖನಗಳು ಯುಜಿಸಿ ಕೇರ್ ಲಿಸ್ಟ್ ಜರ್ನಲ್ ನಲ್ಲಿ ಪ್ರಕಟಗೊಂಡಿರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರಾಗಿರುವ ಇವರು ಕಳೆದ ಐದು ವರ್ಷಗಳಿಂದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತಿ ಪ್ರವೀಣ್ ಚಿಪ್ಕರ್ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಯಲ್ಲಿ ಸಾಫ್ಟವೇರ್ ಡೆವಲಪರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಈ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.













