ಬೆಳ್ತಂಗಡಿ: ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ, PF–ESI, ಬೋನಸ್, ಗ್ರ್ಯಾಚ್ಯುಟಿ, ಉದ್ಯೋಗ ಭದ್ರತೆ ಹಾಗೂ ಗೌರವಯುತ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ಆಗಸ್ಟ್ 18ರಂದು ಟೌನ್ ಹಾಲ್ ಮುಂಭಾಗ ಮಂಗಳೂರಿನಲ್ಲಿ ಹಾಗೂ ದೇಶವ್ಯಾಪಿ ಕಾರ್ಮಿಕ ಪ್ರತಿಭಟನೆ ನಡೆಯಲಿದೆ ಎಂದು ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ವಕೀಲ ಅನಿಲ್ ಕುಮಾರ್ ಯು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾರ್ಮಿಕ ವಲಯಗಳೊಂದಿಗೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಆಶಾ ಹಾಗೂ ಯೋಜನಾ ಕಾರ್ಮಿಕರು, ಕೃಷಿ–ತೋಟಗಾರಿಕೆ, ರಬ್ಬರ್ ಟ್ಯಾಪಿಂಗ್, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕ–ಮಾಲಕರು, ಹೋಟೆಲ್ ಕಾರ್ಮಿಕರು, ಗುತ್ತಿಗೆ–ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಹಾಗೂ ದೈನಂದಿನ ವೇತನದ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರ ಹಕ್ಕು ಮತ್ತು ಹಿತಾಸಕ್ತಿಗೆ ಈ ಹೋರಾಟ ಸಂಬಂಧಿಸಿದೆ.
ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ESI ವೇತನ ಮಿತಿ ರೂ.21,000ರಿಂದ ರೂ.42,000ಕ್ಕೆ, EPF ವೇತನ ಮಿತಿ ರೂ.15,000ರಿಂದ ರೂ.30,000ಕ್ಕೆ ಹೆಚ್ಚಿಸುವುದು, EPS-95 ಕನಿಷ್ಠ ಪಿಂಚಣಿ ರೂ.7,500ಕ್ಕೆ ಹೆಚ್ಚಿಸಿ DA ಹಾಗೂ ವೈದ್ಯಕೀಯ ಸೌಲಭ್ಯ ನೀಡುವುದು, ಬೋನಸ್ ಮತ್ತು ಗ್ರ್ಯಾಚ್ಯುಟಿ ಮಿತಿಗಳನ್ನು ಹೆಚ್ಚಿಸುವುದು, ಯೋಜನಾ ಕಾರ್ಮಿಕರ ಗೌರವಧನ ಹೆಚ್ಚಿಸುವುದು ಹಾಗೂ ಎಲ್ಲಾ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಕಲ್ಪಿಸುವುದು ಸೇರಿದಂತೆ 11 ರಾಷ್ಟ್ರೀಯ ಬೇಡಿಕೆಗಳನ್ನು ಮುಂದಿಡಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿಯೂ ಸಾವಿರಾರು ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳು ಯಾವುದೇ ಒಂದು ಸಂಘಟನೆ ಅಥವಾ ಒಂದು ವಲಯಕ್ಕೆ ಸೀಮಿತವಾಗಿಲ್ಲ. ಆದ್ದರಿಂದ ತಾಲೂಕಿನ ಎಲ್ಲಾ ಕಾರ್ಮಿಕರು ಈ ಹೋರಾಟವನ್ನು ತಮ್ಮ ಹೋರಾಟವೆಂದು ಪರಿಗಣಿಸಿ, ಆ. 18ರಂದು ಮಂಗಳೂರಿನ ಟೌನ್ ಹಾಲ್ ಮುಂಭಾಗ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅನಿಲ್ ಕುಮಾರ್ ಯು ಆತ್ಮೀಯವಾಗಿ ಮನವಿ ಮಾಡಿದ್ದಾರೆ.
“ನಮ್ಮ ಹಕ್ಕುಗಳಿಗಾಗಿ ನಮ್ಮ ಧ್ವನಿ ಒಂದಾಗಬೇಕು; ನಮ್ಮ ಒಗ್ಗಟ್ಟೇ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ತರಲು ಸಾಧ್ಯ. ಬೆಳ್ತಂಗಡಿ ತಾಲೂಕಿನ ಕಾರ್ಮಿಕರ ಶಕ್ತಿ ಮಂಗಳೂರಿನಲ್ಲಿ ಪ್ರತಿಧ್ವನಿಸಬೇಕು.” ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಕಾರ್ಮಿಕ ಬಂಧುಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಗಸ್ಟ್ 18ರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದುಅನಿಲ್ ಕುಮಾರ್ ಯು ಮನವಿ ಮಾಡಿದ್ದಾರೆ.













