ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗಡಾಯಿ ಕಲ್ಲು (ಜಮಲಾಬಾದ್ ಕೋಟೆ) ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸಿ ರೋಪ್ ವೇ ನಿರ್ಮಾಣ ಮಾಡುವಂತೆ ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮನವಿ ಮಾಡಿದ್ದಾರೆ.
ಸಮುದ್ರಮಟ್ಟದಿಂದ ಸುಮಾರು 3,000 ಅಡಿ ಎತ್ತರದಲ್ಲಿರುವ ಈ ಕೋಟೆ ತನ್ನ ಐತಿಹಾಸಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ ಹಾಗೂ ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯ ಗಳಿಂದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ. ಈ ಐತಿಹಾಸಿಕ ಸ್ಮಾರಕವು ಕರ್ನಾಟಕ ಸರಕಾರದ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧೀನದಲ್ಲಿ ಸಂರಕ್ಷಣೆ ಮತ್ತು ನಿರ್ವಹಣೆಗೆ ಒಳಪಟ್ಟಿದೆ.
ಈ ಕೋಟೆಯನ್ನು ತಲುಪಲು ಸುಮಾರು 500 ಮೀಟರ್ ದೂರದ ಬಂಡೆ ಹತ್ತಿ ಹಾಗೂ ಸುಮಾರು 2,000 ಕಲ್ಲಿನಲ್ಲಿ ಕೆತ್ತಲಾದ ಮೆಟ್ಟಿಲುಗಳಿದ್ದು, ಇದು ಆ ಕಾಲದ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಕೌಶಲ್ಯದ ಅದ್ಭುತ ನಿದರ್ಶನ ವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯುವುದರೊಂದಿಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ದೊರೆಯಲಿದೆ. ಅಲ್ಲದೆ, ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ ಇತರ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಆದಾಯವೂ ಹೆಚ್ಚಾಗಲಿದೆ. ಜತೆಗೆ ಈ ಅಮೂಲ್ಯ ಐತಿಹಾಸಿಕ ಪರಂಪರೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲಿ ಪರಿಚಯಿಸುವ ಅವಕಾಶವೂ ಲಭಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.













