ಉಜಿರೆ: ಶಿಕ್ಷಣ ಅಂದರೆ ಕೇವಲ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಪಡೆಯುವುದು ಮಾತ್ರವಲ್ಲ; ಇದು ಆತ್ಮವಿಶ್ವಾಸ, ಮೌಲ್ಯಗಳು, ಸೃಜನಶೀಲತೆ ಮತ್ತು ಸಮಾಜದ ಕಡೆಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು ಕೂಡಾ ಆಗಿದೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ಸಮರ್ಪಣೆ ಇವಿಷ್ಟು ನಿಮ್ಮ ಭವಿಷ್ಯ ಉಜ್ವಲವಾಗಲು ಮತ್ತು ಯಶಸ್ವಿಯಾಗಲು ಕಾರಣ ಎಂದು ಎಸ್.ಡಿ ಎಂ ಮಹಿಳಾ ಐ.ಟಿ.ಐ ಉಜಿರೆ ಕಾಲೇಜಿನ ಓರಿಯಂಟೇಷನ್ ಹಾಗೂ ಕಾನ್ವಕೇಷನ್ ಕಾರ್ಯಕ್ರಮ ಉದ್ಘಾಟಿಸಿ ಶ್ರೀಮತಿ ಸಚಿತಾ ನಂದಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ವಿದ್ಯಾರ್ಥಿಗಳಿಗೆ, ಪ್ರತಿಯೊಬ್ಬ ವಿದ್ಯಾರ್ಥಿಯು ವಿಶಿಷ್ಟ ಪ್ರತಿಭೆಗಳನ್ನು ಹೊಂದಿರುತ್ತಾನೆ. ನಿಮ್ಮ ನಿಮ್ಮಲ್ಲಿ ನಂಬಿಕೆ ಇಡಿ, ದೊಡ್ಡ ಕನಸು ಕಾಣಿರಿ ಮತ್ತು ನಿಮ್ಮ ಗುರಿಗಳ ಕಡೆಗೆ ಸ್ಥಿರವಾಗಿ ಕೆಲಸ ಮಾಡಿ.
ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣದ ಪ್ರಬಲ ಸಾಧನಗಳಾಗಿವೆ. ಎಸ್.ಡಿ.ಎಮ್ ಮಹಿಳಾ ಐಟಿಐನಂತಹ ಸಂಸ್ಥೆಗಳು ಯುವತಿಯರನ್ನು ಆತ್ಮವಿಶ್ವಾಸ, ಕೌಶಲ್ಯ ಮತ್ತು ಸ್ವತಂತ್ರ ವ್ಯಕ್ತಿಗಳಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಾಂತ್ರಿಕ ಕೌಶಲ್ಯಗಳನ್ನು ಕಲಿಯುವುದರ ಜೊತೆಗೆ, ಸಂವಹನ ಕೌಶಲ್ಯ, ತಂಡದ ಕೆಲಸ, ನಾಯಕತ್ವದ ಗುಣಗಳು ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಬೆಳೆಸಿಕೊಳ್ಳಿ, ಏಕೆಂದರೆ ನಿಜವಾದ ಯಶಸ್ಸು ಮನಸ್ಸು, ಹೃದಯ ಮತ್ತು ಕೌಶಲ್ಯಗಳ ಸಮತೋಲಿತ ಬೆಳವಣಿಗೆಯಿಂದ ಬರುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಶ್ರೀ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೆ.ಎನ್ ಜನಾರ್ದನ್ ರವರು ಮಾತನಾಡಿ ಶ್ರೀ ಧರ್ಮಸ್ಥಳ “ಸಿರಿ”ಗ್ರಾಮೋದ್ಯೋಗ ಸಂಸ್ಥೆಯ ಬಾಗಿಲು ಯಾವಾಗಲೂ ನಿಮಗೆ ತೆರೆದಿದ್ದು ಆಸಕ್ತ ಮಹಿಳೆಯರು ಯಾವಾಗ ಬೇಕಾದರೂ ಬರಬಹುದು ಎಂದು ಹೇಳಿ ನೂತನ ಹಾಗೂ ಉದ್ಯೋಗಕ್ಕೆ ತೆರಳಲಿರುವ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಧನ್ಯ ಕುಮಾರ್ ಇವರು ಮಾತನಾಡಿ ಇಂದು ಎಲ್ಲಾ ರೀತಿಯ ಮಾಹಿತಿಗಳು ನಮ್ಮ ಕೈ ಬೆರಳಿನಲ್ಲಿ ಇರುವುದರಿಂದ ಯಾವುದು ಸರಿ, ಯಾವುದು ತಪ್ಪು ಅಂತ ಪರಿಶೀಲನೆ ಮಾಡಬೇಕಾದ ಅನಿವಾರ್ಯತೆ ನಮಗೆ ಇದೆ ಆದುದರಿಂದ ಆಲೋಚಿಸಿ ಮುಂದುವರೆಯಿರಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಕು. ನಿಧಿ ಧನ್ಯವಾದವಿತ್ತರು. ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು.













