ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು, ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯ ಸೇನೆ ಹಾಗೂ ಆರಕ್ಷಕ ವಿಭಾಗಗಳಲ್ಲಿ ಸೇವೆಗೈಯುತ್ತಿರುವ ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಕರಿಗೆ ಗೌರವಾರ್ಪಣೆ, “ರಕ್ಷಕ ನಮನ – 2026” ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅತಿಥಿಗಳಾದ ಪೊಲೀಸ್ ಅಧೀಕ್ಷಕರೂ ಉತ್ತರ ಕನ್ನಡ ಜಿಲ್ಲೆಯ ಎಸ್ ಪಿ ಲೋಕಾಯುಕ್ತರು ಕುಮಾರಚಂದ್ರ ಅವರು “ರಕ್ಷಕ ನಮನ 2026” ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ವಿದ್ಯಾದಾನ ಎಲ್ಲದಕ್ಕಿಂತಲೂ ಶ್ರೇಷ್ಠ ದಾನವಾಗಿದೆ ವಿದ್ಯೆಯು ಸುಗಮವಾದ ಶಿಸ್ತುಬದ್ಧ ಜೀವನಕ್ಕೆ ದಾರಿಯಾಗಿದೆ, ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಎಕ್ಸೆಲ್ ನಂತಹ ಉತ್ತಮ ಸಂಸ್ಥೆಯನ್ನು ಆಯ್ಕೆ ಮಾಡಿದರೆ ತಮ್ಮ ಗುರಿ ತಲುಪಲು ಸಾಧ್ಯ , ಆ ಮೂಲಕ ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು” ಎಂದರು. ತನ್ನ ಕುಟುಂಬದಿಂದ ದೂರವಾಗಿ ಹಗಲಿರುಳು ದೇಶಕ್ಕಾಗಿ ದುಡಿಯುವ ಸೈನಿಕರು, ಪೊಲೀಸರು ಸಮಾಜದ ಪ್ರಬಲ ಶಕ್ತಿಗಳು ಅವರ ತ್ಯಾಗ ಮನೋಭಾವದಿಂದ ದೇಶ ಸುಭದ್ರ ಸ್ಥಿತಿಯಲ್ಲಿದೆ ಎಂದು ದೇಶ ಕಾಯುವ ಪ್ರತಿಯೊಬ್ಬ ರಕ್ಷಕನಿಗೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ದೇಶ ಸೇವೆಯ ಕೈಂಕರ್ಯ ಹೊತ್ತು ಭಾರತೀಯ ಸೇನೆ ಹಾಗೂ ಆರಕ್ಷಕ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 80ಕ್ಕೂ ಅಧಿಕ ಅಧಿಕಾರಿಗಳನ್ನು ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಭಾರತೀಯ ಸೇನೆ ಹಾಗೂ
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಬದ್ಧ ಕರ್ತವ್ಯ ನಡೆಸಿ ದೇಶ ಸೇವೆಗಾಗಿ ಅವಿರತ ದುಡಿದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಗಣ್ಯರನ್ನು ಸನ್ಮಾನಿಸಿದ ಅಭೂತಪೂರ್ವ ಕ್ಷಣ ಪ್ರತಿಯೊಬ್ಬರ ಮೈ ನವಿರೇಳುವಂತೆ ಮಾಡಿತು.

ವೇದಿಕೆಯಲ್ಲಿದ್ದ ಇನ್ನೋರ್ವ ಅತಿಥಿ ಭಾರತೀಯ ಸೇನೆಯ ಮಾಜಿ ಸೈನಿಕ ಹಾಗೂ ಬೆಳ್ತಂಗಡಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೊಹಮ್ಮದ್ ರಫಿ ಮಾತನಾಡಿ ದೇಶಭಕ್ತಿಯ ಪ್ರತೀಕವಾಗಿ ಇಂದು ಸೈನಿಕರಿಗೆ, ಪೊಲೀಸರಿಗೆ ಗೌರವ ನೀಡಲಾಗಿದೆ. ದೇಶದ ಉತ್ತಮ ಪ್ರಜೆಯಾಗಿ ದೇಶದ ಕಾನೂನನ್ನು, ಸಂಪತ್ತನ್ನು ರಕ್ಷಿಸುವುದೇ ದೇಶ ಸೇವೆಯಾಗಿದೆ. ಹೆತ್ತವರಿಗೆ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆಗೆ ಗೌರವ ನೀಡಿದರೆ ದೇಶಕ್ಕೆ ಗೌರವ ಸಲ್ಲಿಸಿದಂತೆ ಎಂದರು.
ಸನ್ಮಾನಿತಗೊಂಡ ಮಾಜಿ ಸೈನಿಕ ಬಾಗಲಕೋಟೆಯ ಸಂತಪ್ಪ ಮಾತನಾಡಿ ಎಕ್ಸೆಲ್ ನಂತಹ ಶಿಕ್ಷಣ ಸಂಸ್ಥೆ ಸುಮಂತ್ ಕುಮಾರ್ ಜೈನ್ ಅಂತಹ ಅಧ್ಯಕ್ಷರು ಸಾವಿರಕ್ಕೆ ಒಬ್ಬರು, ಕಿರಿಯ ವಯಸ್ಸಿನಲ್ಲೇ ಕೈಕೊಂಡ ಅವರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಎಕ್ಸೆಲ್ ಸಮೂಹ ಸಂಸ್ಥೆಯ ಸಂಸ್ಥಾಪಕ ಬಿ ಸುಮಂತ್ ಕುಮಾರ್ ಜೈನ್ ಮಾತನಾಡಿ ನಮ್ಮ ಕಾಲೇಜಿನಲ್ಲಿ ವಿದ್ಯೆ ಜೊತೆಗೆ ವ್ಯಕ್ತಿತ್ವ ನಿರ್ಮಾಣವು ನಡೆಯಬೇಕೆಂಬ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ನಮ್ಮ ಜೀವನದ ಮೊದಲ ದೈವತ್ವದ ಸ್ಥಾನ ತಂದೆ ತಾಯಿಗಳು, ಗುರುಗಳು ಎರಡನೇ ಸ್ಥಾನವನ್ನು ತುಂಬುತ್ತಾರೆ. ದೇಶದ ಭದ್ರತೆಯನ್ನು ಕಾಯುವ ಸೈನಿಕರು ಆರಕ್ಷಕರ ಸಿಬ್ಬಂದಿಗಳೂ ದೇವರ ಸಮಾನ ನಿಮ್ಮ ಸೇವೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ, ಪರಿಶ್ರಮದಿಂದ ಓದಿ ಗುರಿ ತಲುಪಲು ನೀಟ್ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನಿಂದ ಅತ್ಯಧಿಕ ಅಂಕಗಳಿಸಿದ ಚಿನ್ಮಯ್ ಗೌಡ ನಿಮಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಚಾಲನೆ ನೀಡಿದರು. ಪ್ರಾಚಾರ್ಯರಾದ ಡಾ| ಪ್ರಜ್ವಲ್ ಕಜೆ ಸ್ವಾಗತಿಸಿ,ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮುಖ್ಯಸ್ಥರು ಆಡಳಿತ ಮಂಡಳಿಯ ಮಾರ್ಗದರ್ಶಕ ಶಾಂತಿರಾಜ್ ಜೈನ್ ವಂದಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರಸನ್ನ ಭೋಜ, ಅರುಣ್ ಕ್ರಾಸ್ಟೋಲಿನ್ , ಅನನ್ಯ ಜೈನ್, ಹಾಗೂ ಜೀವ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಪ್ರಜ್ವೀತ್ ರೈ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ನವೀನ್ ಕುಮಾರ್ ಮರಿಕೆ, ಉಪಪ್ರಾಚಾರ್ಯರ ರೋಹಿತ್ ಕುಮಾರ್, ಹಾಗೂ ಹರೀಶ್, ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ನಿಲಯ ಮೇಲ್ವಿಚಾರಕರಾದ ಮಲ್ಲೇಶ್ ಜೈನ್, ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.












