ಗುರುವಾಯನಕೆರೆ: ಶಿಕ್ಷಣ ಸಂಸ್ಥೆಯು ಸದಾ ಪೋಷಕರಿಗೆ ತೆರೆದ ಬಾಗಿಲಾಗಿರಬೇಕು. ತಮ್ಮ ಮಕ್ಕಳೊಂದಿಗೆ ಶಾಲೆಯಲ್ಲಿ ಬೆರೆತು, ಅವರೊಂದಿಗೆ ಸಂತಸ ಹಂಚಿಕೊಳ್ಳುವ ಇಂತಹ ಸಂದರ್ಭಗಳು ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದು ಎಕ್ಸೆಲ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
ಗುರುವಾಯನಕೆರೆಯ ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರಿಗಾಗಿ ಆಯೋಜಿಸಲಾಗಿದ್ದ ಕುಟುಂಬ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯ ಪ್ರಾಂಶುಪಾಲೆ ಸುಮಿತ್ರಾ ಗೌಡ ಮಾತನಾಡಿ, ಪೋಷಕರು, ಮಕ್ಕಳು ಹಾಗೂ ಶಾಲೆಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ನಡೆದ ಕುಟುಂಬ ಕಲೋತ್ಸವವು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಪೋಷಕರು ತಮ್ಮ ಮಕ್ಕಳೊಂದಿಗೆ ಅತ್ಯಂತ ಪ್ರೀತಿ ಹಾಗೂ ಉತ್ಸಾಹದಿಂದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಪೋಷಕರಿಗಾಗಿ ಫ್ಯಾಷನ್ ಶೋ, ಕುಕ್ಕಿಂಗ್ ವಿತೌಟ್ ಫೈರ್, ಮೆಮೊರಿ ಗೇಮ್, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ತಮ್ಮ ಮಕ್ಕಳೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಕಾರ್ಯಕ್ರಮವನ್ನು ಸಿಂಧೂರ ನಿರೂಪಿಸಿದರು. ಶಿಕ್ಷಕಿ ಶೋಭಾ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.











