ನಿಡ್ಲೆ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.29ರಂದು ಸಂಘದ ಅಧ್ಯಕ್ಷ ಧನಂಜಯ ಗೌಡ ಅವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ 2025–26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರಗಳು ಹಾಗೂ ಸಂಘದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಸಂಘವು ಪ್ರಸಕ್ತ ಸಾಲಿನಲ್ಲಿ ₹99 ಲಕ್ಷಕ್ಕೂ ಹೆಚ್ಚಿನ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಧನಂಜಯ ಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರ ಹಿತಾಸಕ್ತಿ ಹಾಗೂ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿನಿಮಯ ನಡೆಯಿತು. ಈ ಹಿಂದಿನ ಸಂಘದ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪ ಗೊಂಡಂತೆ ಸಂಘದ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಸಾಲವನ್ನು ಮನ್ನಾ ಮಾಡುವ ಉದ್ದೇಶದಿಂದ, ಸಂಘದ ವ್ಯಾಪ್ತಿಯಲ್ಲಿರುವ ಸದಸ್ಯರ ಪ್ರತಿಯೊಂದು ಸಾಲಕ್ಕೂ ವಿಮೆ ಜಾರಿಗೊಳಿಸುವ ಪ್ರಸ್ತಾಪವನ್ನು ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿತು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಆದರೆ, ಪರಿಣಿತರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಯಾವುದೇ ಕಾರಣಕ್ಕೂ ಸಂಘಕ್ಕೆ ನಷ್ಟ ಉಂಟಾಗದ ರೀತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ.ಕೆ. ಹಾಗೂ ನಿರ್ದೇಶಕರಾದ ವಿಜಯ್ ಕುಮಾರ್ ಎಚ್., ಆನಂದಗೌಡ ಎಂ., ಕೆ. ರಮೇಶ್ ರಾವ್, ಕೆ. ಹೇಮಂತ್ ಗೌಡ, ಜಯರಾಂ ಪಾಳಂದೈ ಎಸ್., ಗಾಯತ್ರಿ ಎಚ್. ಗೌಡ, ವಿಜಯಲಕ್ಷ್ಮಿ ಕೆ., ರಾಜು, ಮೋಹನ ಪೂಜಾರಿ, ಧನಂಜಯ ಬಿ. ಹಾಗೂ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಪಿ. ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಿಗ ವೇಣುಗೋಪಾಲ್ ಬಿ. ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಸಂಘದ ನಿರ್ದೇಶಕಿ ಗಾಯತ್ರಿ ಹೆಚ್. ಪ್ರಾರ್ಥಿಸಿದರು. ನಿರ್ದೇಶಕ ಕೆ. ರಮೇಶ್ ರಾವ್ ಸ್ವಾಗತಿಸಿ, ನಿರ್ದೇಶಕಿ ವಿಜಯಲಕ್ಷ್ಮೀ ಕೆ.ಧನ್ಯವಾದ ಅರ್ಪಿಸಿದರು. ಸಭೆಯ ಯಶಸ್ವಿಗೆ ಸಂಘದ ಸಿಬ್ಬಂದಿಗಳು ಸಹಕರಿಸಿದರು.











