ಬೆಳ್ತಂಗಡಿ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಮಹೋತ್ಸವವು ಆ. 28ರಂದು ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಕನ್ನಾಜೆ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಪೂಜಾ ಮಹೋತ್ಸವದ ವಿಶೇಷ ಅಂಗವಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಅವರ ಮಾತೃಶ್ರೀ ಶ್ರೀಮತಿ ಕಾಶಿ ಶೆಟ್ಟಿ ಅವರ ದಿವ್ಯ ಸ್ಮರಣಾರ್ಥವಾಗಿ ಆಗಮಿಸಿದ ಮಹಿಳೆಯರಿಗೆ ಜಗದೀಶ್ ಕನ್ನಾಜೆ ಇವರ ಸಹಕಾರದೊಂದಿಗೆ ವಸ್ತ್ರದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಗದೀಶ್ ಕನ್ನಾಜೆ ಮಾತನಾಡಿ, “ಸಹೃದಯಿ ಬಂಧು, ಶಶಿಧರ್ ಶೆಟ್ಟಿ ಬರೋಡಾ ಅವರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಭಗವಂತನು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಬಳಿಕ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಮಾತನಾಡಿ, ವರಮಹಾಲಕ್ಷ್ಮೀ ಹಬ್ಬವು ನಾಡಿನೆಲ್ಲೆಡೆ ಸಂಭ್ರಮವನ್ನು ತಂದಿದೆ. ಈ ಹಬ್ಬದ ಮೂಲಕ ದೇಶ ಸೇವೆಯ ಪ್ರತಿಜ್ಞೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಕಾಶಿ ಶೆಟ್ಟಿ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದು, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.











