ಬೆಳ್ತಂಗಡಿ: ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆ. 31ರಂದು ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ ಸಂಘವು ರೂ. 24.43 ಕೋಟಿ ವ್ಯವಹಾರ ನಡೆಸಿದ್ದು, ರೂ. 30.91 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.22 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರಾದ ಶೀನಪ್ಪ ಗೌಡ, ರಾಜೇಶ್ ಎ., ಕರಿಯಪ್ಪ, ಪುರುಷೋತ್ತಮ ಗೌಡ, ಉಮೇಶ್ ಪೂಜಾರಿ, ರಮಾನಂದ ಎಂ., ಶಾರದಾ ಆರ್. ಗೌಡ, ಪ್ರತಿಮಾ, ಕೃಷ್ಣ ನಾಯ್ಕ, ಸುನಿಲ್ ಕುಮಾರ್, ಪದನಿಮಿತ್ತ ಸದಸ್ಯೆ ಮಾಲತಿ ಉಪಸ್ಥಿತರಿದ್ದರು.
ಹಾಲು ಹಾಕದ ಸದಸ್ಯರನ್ನು ಸಂಘದಿಂದ ಬಿಡಬೇಕು ಎಂದು ಸದಸ್ಯ ಸೀತಾರಾಮ ಮಡಿವಾಳ ಸೂಚಿಸಿದರು. ಇದಕ್ಕೆ ಉತ್ತರಿಸಿದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ನೋಟಿಸ್ ನೀಡಿ ಅಮಾನತು ಮಾಡಬಹುದು ಎಂದರು. ನಿವೃತ್ತ ಕಾರ್ಯದರ್ಶಿ ಜಯರಾಮ ಶೆಟ್ಟಿ ಅವರು ಮನೆ ಮನೆಗೆ ಹಾಲು ಸಂಗ್ರಹಕ್ಕೆ ವಾಹನ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯದರ್ಶಿ ಎಂ. ಸತೀಶ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ಹೇಮಲತಾ ಪಿ. ಅವರು ಜಮಾ-ಖರ್ಚು ಓದಿದರು.
ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮಾತನಾಡಿ ಹೆಣ್ಣು ಕರುಗಳ ಇಂಡೆಕ್ಷನ್ ಕೊಡಿಸುವುದರ ಮೂಲಕ ಹೊರಿಗಳ ಸಂತಾನ ಕಡಿಮೆಯಾಗುವಂತೆ ಪ್ರಯತ್ನಿಸಬೇಕು ಎಂದರು.
ಸಂಘವು ಕಣಿಯೂರು, ಬಂದಾರು, ಮೊಗ್ರು, ಉರುವಾಲು ಗ್ರಾಮಗಳ ವ್ಯಾಪ್ತಿ ಹೊಂದಿದ್ದು, ಈ ಸಾಲಿನಲ್ಲಿ 12,19,340 ಲೀ. ಹಾಲು ಸಂಗ್ರಹಿಸಿದೆ. ದಿನಕ್ಕೆ ಸರಾಸರಿ 3750 ಲೀ. ಸಂಗ್ರಹವಾಗುತ್ತಿದೆ. ಸಂಘವು 2002ರಿಂದ ಹಾಲು ಶೀತಲೀಕರಣ ಘಟಕ ಹೊಂದಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಂಘ ಪ್ರಶಸ್ತಿ ಸೇರಿದಂತೆ 17 ಬಾರಿ ತಾಲೂಕು ಮಟ್ಟದ ಅತ್ಯುತ್ತಮ ಸಂಘ, 3 ಬಾರಿ ಅಗ್ರಮಾನ್ಯ ಸಂಘ ಪ್ರಶಸ್ತಿ ಪಡೆದಿದೆ ಎಂದು ಕಾರ್ಯದರ್ಶಿ ತಿಳಿಸಿದರು.
ಲೆಕ್ಕಪರಿಶೋಧನಾ ವರದಿಯನ್ನು ಮಾಲತಿ ಮಂಡಿಸಿದರು. ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಿಬ್ಬಂದಿ ಗುರುಪ್ರಸಾದ್, ಅಮಿತ್ ಕುಮಾರ್, ರಿಜೇಶ್ ಕುಮಾರ್ ಸಹಕರಿಸಿದರು. ನಿರ್ದೇಶಕ ರಮಾನಂದ ಎಂ. ಸ್ವಾಗತಿಸಿ ವಂದಿಸಿದರು.











