ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಓಣಂ ಹಾಗೂ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಹೋಟೆಲ್ ಓಷಿಯನ್ ಪರ್ಲ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರೋಟರಿ ಕುಟುಂಬದ ಸದಸ್ಯರು ಪಾಲ್ಗೊಂಡರು.

ಮಕ್ಕಳ ದೇಶಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ ಕೆ.ವಿ. ಸದಸ್ಯರನ್ನು ಸ್ವಾಗತಿಸಿ, ಕಳೆದ ವಾರ ನಡೆದ ಕಾರ್ಯಕ್ರಮಗಳ ವಿವರ ನೀಡಿದರು.
ಕೇರಳದ ಸಾಂಪ್ರದಾಯಿಕ ಚೆಂಡೆವಾದನದೊಂದಿಗೆ ಮಹಾಬಲಿಯ ಪ್ರವೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಓಣಂ ಆಚರಣೆಯ ಅಂಗವಾಗಿ ರೋಟರಿ ಹಾಗೂ ಆನ್ಸ್ ಕ್ಲಬ್ ಸದಸ್ಯೆಯರಿಂದ ತಿರುವಾಧಿರ ನೃತ್ಯ ನಡೆಯಿತು. ಕಾರ್ಯಕ್ರಮಕ್ಕೆ ಜಪಾನ್ ದೇಶದ ನಿಯೋಗವೊಂದು ಅತಿಥಿಗಳಾಗಿ ಆಗಮಿಸಿ, ರೋಟರಿ ಕ್ಲಬ್ನ ವಿವಿಧ ಕಾರ್ಯಕ್ರಮಗಳನ್ನು ಸಂತೋಷದಿಂದ ವೀಕ್ಷಿಸಿತು.

ಬಳಿಕ ಆನ್ಸ್ ಕ್ಲಬ್ ಸದಸ್ಯೆಯರಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಭಾತೃತ್ವದ ಸಂಕೇತವಾದ ರಕ್ಷಾ ಬಂಧನದ ಅಂಗವಾಗಿ ಸಹೋದರಿಯರು ಅಣ್ಣಂದಿರಿಗೆ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ರಕ್ಷೆ ಕಟ್ಟಿದರು.
ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ರೊ. ಡಾ. ಶಶಿಧರ ಡೋಂಗ್ರೆ ಹಾಗೂ ಆನ್ ಸುಷ್ಮಾ ಡೋಂಗ್ರೆ, ರೊ. ಗೋಪಾಲಕೃಷ್ಣ ಗುಲ್ಲೋಡಿ ಹಾಗೂ ಆನ್ ಶೋಭಾ, ರೊ. ವಿವೇಕ್ ಸಂಪತ್ ಆರಿಗ ಹಾಗೂ ಆನ್ ದೀಪ್ತಿ ಹೆಗ್ಡೆ, ರೊ. ಡಾ. ರೋಹನ್ ದೀಕ್ಷಿತ್ ಹಾಗೂ ಆನ್ ಡಾ. ನಿಖಿತಾ ಮಿರ್ಲೆ ಅವರ ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವು ಆನ್ ಸರಸ್ವತಿ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯದರ್ಶಿ ರೊ. ಡಾ. ರಾಘವೇಂದ್ರ ಪಿದಮಲೆ ವಂದಿಸಿದರು. ರೊ. ರೇಶ್ಮಾ ಹೆಗ್ಡೆ ಹಾಗೂ ರೊ. ಬಿ.ಕೆ. ಧನಂಜಯರಾವ್ ಕಾರ್ಯಕ್ರಮ ನಿರೂಪಿಸಿದರು.
ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ: ಡಾ. ದಯಾಕರ್ಗೆ ಸನ್ಮಾನ
ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ಚಾನೆಲ್ ವತಿಯಿಂದ ನೀಡಲಾಗುವ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾದ ರೋಟರಿ ಸದಸ್ಯ ರೊ. ಡಾ. ದಯಾಕರ್ ಎಂ.ಎಂ. ಅವರನ್ನು ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದೊರೆತ ಈ ಗೌರವಕ್ಕೆ ಕ್ಲಬ್ನ ಸದಸ್ಯರು ಅಭಿನಂದನೆ ಸಲ್ಲಿಸಿದರು.











