ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವಿಜ್ಞಾನವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಗಂಡಿಬಾಗಿಲಿನ ವಿಶೇಷ ಚೇತನರ ನೆಲೆಯಾಗಿರುವ ಸಿಯೋನ್ ಆಶ್ರಮದಲ್ಲಿ ‘ಲ್ಯಾಬ್ ಇನ್ ಕ್ಯಾಬ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಹಾಗೂ ವಿಶೇಷ ಚೇತನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮತ್ತು ಪ್ರಾಯೋಗಿಕ ವಿಜ್ಞಾನದ ಅನುಭವವನ್ನು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಪ್ರಯೋಗಗಳು ಮತ್ತು ಮಾದರಿಗಳನ್ನು ಪ್ರದರ್ಶಿಸಲಾಯಿತು. ಏಕದಳ ಹಾಗೂ ದ್ವಿದಳ ಸಸ್ಯಗಳ ಕಾಂಡದ ಒಳರಚನೆ, ಸಸ್ಯಗಳಲ್ಲಿನ ಬಾಷ್ಪೀಕರಣ ಕ್ರಿಯೆ, ಎಲೆಗಳಲ್ಲಿ ಕಂಡುಬರುವ ವಿವಿಧ ವರ್ಣದ್ರವ್ಯಗಳು ಹಾಗೂ ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗಳನ್ನು ಸರಳ ಮತ್ತು ಮನಮುಟ್ಟುವ ರೀತಿಯಲ್ಲಿ ವಿವರಿಸಲಾಯಿತು.
ಪ್ರಾಯೋಗಿಕ ಪ್ರದರ್ಶನಗಳು ವಿಶೇಷ ಚೇತನರಲ್ಲಿ ಅಪಾರ ಕುತೂಹಲ ಮೂಡಿಸಿದ್ದು, ಅವರು ಉತ್ಸಾಹದಿಂದ ಭಾಗವಹಿಸಿ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು. ವಿಜ್ಞಾನವನ್ನು ನೇರವಾಗಿ ಅನುಭವಿಸುವ ಅವಕಾಶವು ಅವರಿಗೆ ಹೊಸ ಕಲಿಕೆಯ ಅನುಭವವನ್ನು ನೀಡಿತು. ಕಾರ್ಯಕ್ರಮವು ವಿಜ್ಞಾನ ಮತ್ತು ಸಮಾಜದ ನಡುವೆ ಅರ್ಥಪೂರ್ಣ ಸೇತುವೆಯಾಗಿ ಕಾರ್ಯನಿರ್ವಹಿಸಿತು.
ಸಿಯೋನ್ ಆಶ್ರಮದ ಯು. ಸಿ. ಪೌಲೋಸ್ ಅವರ ಪ್ರೋತ್ಸಾಹ ಮತ್ತು ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಆಶ್ರಮದ ಸಿಬ್ಬಂದಿಗಳಾದ ರಿತೇಶ್ ಹಾಗೂ ಶ್ರದ್ಧಾ ಅವರು ಕಾರ್ಯಕ್ರಮದ ಸುಸೂತ್ರ ಆಯೋಜನೆಗೆ ಅಮೂಲ್ಯ ಸಹಕಾರ ನೀಡಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಭಿಲಾಷ್ ಕೆ. ಎಸ್. ಹಾಗೂ ಸಹಾಯಕ ಪ್ರಾಧ್ಯಾಪಕಿ ಮಂಜುಶ್ರೀ ಕೆ. ಕಾರ್ಯಕ್ರಯ ಸಂಯೋಜಿಸಿದರು. ವಿಭಾಗದ ವಿದ್ಯಾರ್ಥಿನಿಯರಾದ ಅನ್ವಿಟಾ ಸೆರಾ, ಅರ್ಚನಾ ಹಾಗೂ ಅಲಕ ಅವರು ಪ್ರಾಯೋಗಿಕ ಪ್ರದರ್ಶನಗಳನ್ನು ನಡೆಸಿಕೊಟ್ಟು ಕಾರ್ಯಕ್ರಮದ ಯಶಸ್ಸಿಗೆ ಸಕ್ರಿಯವಾಗಿ ಕೈಜೋಡಿಸಿದರು.











