ವೇಣೂರು: ಸರಕಾರಿ ಪ್ರೌಢಶಾಲೆ ವೇಣೂರು ಇಲ್ಲಿ ನಡೆದ ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ 17ರ ವಯೋಮಾನದ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಅಳದಂಗಡಿ ಪ್ರಥಮ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿ ಪ್ರಥಮ ಹಾಗೂ ಸರಕಾರಿ ಪ್ರೌಢಶಾಲೆ ಅಳದಂಗಡಿ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಗಳಿಸಿತು.
ಪಂದ್ಯಾಟವನ್ನು ವೇಣೂರು ಪ್ರೌಢಶಾಲಾ ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಉದ್ಘಾಟಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವೇಣೂರು ಅಧ್ಯಕ್ಷ ಲುಕಾಸ್ ಕೊರೆಯ, ಉದ್ಯಮಿಗಳಾದ ಭಾಸ್ಕರ್ ಪೈ, ಜಿನರಾಜ ಜೈನ್, ಮೋಹನದಾಸ ಹೆಗ್ಡೆ, ಪಂಚಾಯತ್ ಸದಸ್ಯರಾದ ನೇಮಯ್ಯ ಕುಲಾಲ್, ಸಂಭಾಷಿಣಿ ಜೈನ್, ಪಿಡಿಒ ಪ್ರಕಾಶ್, ಎಸ್ಡಿಎಂಸಿ ಉಪಾಧ್ಯಕ್ಷೆ ಸುಶೀಲ ಬಜಿರೆ, ನಿವೃತ್ತ ಮುಖ್ಯ ಶಿಕ್ಷಕ ಪ್ರಭಾಕರ್ ಅಂಡಿಂಜೆ, ಶ್ರೀಕಾಂತ್ ಭಟ್, ಆದಮ್ ಕೊಪ್ಪದ ಬಾಕಿಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ವೆಂಕಟೇಶ್ ತುಳುಪುಳೆ ಸ್ವಾಗತಿಸಿದರು. ಕನ್ನಡ ಶಿಕ್ಷಕ ರವೀಂದ್ರ ಕೆ. ಧನ್ಯವಾದವಿತ್ತರು. ದೈಹಿಕ ಶಿಕ್ಷಣ ಶಿಕ್ಷಕ ಲೋಕಯ್ಯ ಎನ್. ಸಹಕರಿಸಿದರು. ನೆಲ್ಸನ್ ಹೆರಾಲ್ಡ್ ಕ್ಯಾಸ್ಟಲಿನೋ ಕಾರ್ಯಕ್ರಮ ನಿರ್ವಹಿಸಿದರು.












