ಬೆಳ್ತಂಗಡಿ: ನಾವು ಯಾವ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಳ್ಳಾರಿ ಚಲೋ ಪಾದಯಾತ್ರೆ ಆರಂಭ ಮಾಡಿದ್ದೇವೋ ಆ ಉದ್ದೇಶ ಈಡೇರಿದ್ದು, ಸರ್ಕಾರ ಹೋರಾಟಕ್ಕೆ ಮಣಿದಿದೆ. ನಮ್ಮ ಪಾದಯಾತ್ರೆಯ ಹೋರಾಟ ಸರ್ಕಾರವನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಉತ್ತರ ಕರ್ನಾಟಕ ಭಾಗವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂಬ ಕಾರಣಕ್ಕೆ ನಮ್ಮ ಹೋರಾಟ ಆರಂಭಗೊಂಡಿತ್ತು. ಬರ ಘೋಷಣೆ ಮಾಡಬೇಕು, ಸಿಎಂ ಆದಿಯಾಗಿ ಸಚಿವರು ಉತ್ತರ ಕರ್ನಾಟಕದ ಬರ ಪರಿಸ್ಥಿತಿ ಅವಲೋಕನಕ್ಕೆ ತೆರಳಬೇಕು ಎಂಬ ಬೇಡಿಕೆ ಇಟ್ಟಿದ್ದೆವು. ಸರ್ಕಾರ ಬರ ಘೋಷಣೆ ಮಾಡಿದ್ದಲ್ಲದೆ ಸಿಎಂ ಖುದ್ದು ಉತ್ತರ ಕರ್ನಾಟಕ ಭಾಗಕ್ಕೆ ಹೋಗಿ ಬರ ಪರಿಶೀಲಿಸಿದ್ದು ನಮ್ಮ ಹೋರಾಟದ ಫಲ ಎಂದರು.












