ಬೆಳ್ತಂಗಡಿ: ಕನ್ಯಾ ಮರಿಯಮ್ಮನವರ ಜನ್ಮದಿನದ ಪವಿತ್ರ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಅದ್ಧೂರಿಯಾಗಿ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಿಶೇಷ ಬಲಿಪೂಜೆ, ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಮಾತೆ ಮರಿಯಮ್ಮನವರ ಆಶೀರ್ವಾದವನ್ನು ಪಡೆದರು.

ಹಬ್ಬದ ಆರಂಭದಲ್ಲಿ ಬಿಷಪ್ ಲಾರೆನ್ಸ್ ಮುಕ್ಕೋಝಿ ಅವರು ಹೊಸ ತೆನೆ (ಬೆಳೆ)ಯನ್ನು ಆಶೀರ್ವದಿಸಿದರು. ರೈತರು ಬೆಳೆಸಿದ ಹೊಸ ತೆನೆಯನ್ನು ದೇವರಿಗೆ ಅರ್ಪಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಷಪ್ ಅವರು ದೇವರು ನೀಡಿರುವ ಪ್ರಕೃತಿಯ ವರಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು. ಹೊಸ ಬೆಳೆ ಎಲ್ಲರ ಮನೆಗಳಲ್ಲಿ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ತರಲಿ ಎಂದು ಪ್ರಾರ್ಥಿಸಿದರು.
.
ಬಳಿಕ ಬೆಳ್ತಂಗಡಿ ಸಂತೆಕಟ್ಟೆಯಿಂದ ಚರ್ಚ್ವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಕ್ತರು ಭಕ್ತಿಗೀತೆಗಳು ಹಾಗೂ ಪ್ರಾರ್ಥನೆಗಳೊಂದಿಗೆ ಪಾಲ್ಗೊಂಡರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಪ್ರಧಾನ ಧರ್ಮಗುರು ರೆ.ಫಾ ವಾಲ್ಟರ್ ಡಿಮೆಲ್ಲೋ ಫಾದರ್ ಜೈಸನ್ ಸಲ್ದಾನ ಫಾ.ಕ್ಲಿರ್ಫಡ್ ಸೈಮನ್ ಪಿಂಟೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ತಮ್ಮ ಪ್ರವಚನದಲ್ಲಿ ಅವರು, “ನಾವೆಲ್ಲರೂ ಒಂದೇ ಕುಟುಂಬದ ಮಕ್ಕಳಂತೆ ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಐಕ್ಯತೆಯಿಂದ ಬದುಕಬೇಕು. ಮಾತೆ ಮರಿಯಮ್ಮನವರ ಜೀವನ ನಮಗೆ ಪ್ರೀತಿ, ಸೇವೆ ಮತ್ತು ವಿನಯದ ಆದರ್ಶವಾಗಿದೆ” ಎಂದು ಸಂದೇಶ ನೀಡಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಕ್ತಿಪೂರ್ವಕವಾಗಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು, ಯುವಕರು, ಮಕ್ಕಳು ಹಾಗೂ ಹಿರಿಯರು ಸೇರಿ ಎಲ್ಲ ವರ್ಗದ ಜನರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಚರ್ಚಿನ ಉಪಾಧ್ಯಕ್ಷರು, ಕಾರ್ಯದರ್ಶಿ, ವಾಳೆಯದ ಗುರುಕಾರು ಸಂಯೋಜಕರು, ಧರ್ಮಭಗಿನಿಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಸಹಕರಿಸಿದರು. ಚರ್ಚ್ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು.












