ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಹಾಗೂ ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅದಾನಿ ಸಮೂಹದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ, ಪ್ರಸ್ತುತ ಸಮಾಜದಲ್ಲಿ ಉತ್ತಮ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ಪದವಿಯನ್ನು ಪಡೆದು ಹೊರಬರುತ್ತಿರುವ ಯುವಜನರು ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಜಾಗತಿಕ ಪೈಪೋಟಿಯಿಂದ ಸ್ಥಳೀಯರ ಜೊತೆಗೆ ಹಾಗೂ ದೇಶದಾದ್ಯಂತ ಇರುವ ಪ್ರತಿಭೆಗಳೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇಂದು ಕೇವಲ ಪದವಿ ಇದ್ದರೆ ಸಾಲದು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಜ್ಞಾನವನ್ನು ಹೊಂದಿ ಬಹುಮುಖ ಪ್ರತಿಭೆಯನ್ನು ಹೊಂದಿರುವವರು ಮಾತ್ರ ಉತ್ತಮ ರೀತಿಯಲ್ಲಿ ಈ ಸಮಾಜದಲ್ಲಿ ಬದುಕಲು ಸಾಧ್ಯ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾವು ಎದುರಿಸಲಿರುವ ಸವಾಲುಗಳಿಗೆ ಈಗಿನಿಂದಲೇ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಮಾಜದಲ್ಲಿ ಒಬ್ಬ ವ್ಯಕ್ತಿ ಉತ್ತಮ ವ್ಯಕ್ತಿಯಾಗಿ ಬದುಕು ಕಟ್ಟಿಕೊಂಡಿದ್ದರೆ ಅದರ ಹಿಂದೆ ಪೋಷಕರ ಮತ್ತು ಗುರುಗಳ ಕಠಿಣ ಪರಿಶ್ರಮ, ತ್ಯಾಗ , ಪ್ರೀತಿ ಅಡಗಿರುತ್ತದೆ. ಗುರುಗಳು ಆ ವ್ಯಕ್ತಿಯ ಬದುಕು ರೂಪಿಸಿದ ಶಿಲ್ಪಿಗಳಾಗಿರುತ್ತಾರೆ. ಆದ್ದರಿಂದ ಎಂದೆಂದಿಗೂ ತಾವು ತಮ್ಮ ಗುರುಗಳನ್ನು ಸ್ಮರಿಸುವುದು ಗೌರವಿಸುದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ : ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಕರ್ಪೆಯಲ್ಲಿನ ನಿವೃತ್ತ ಶಿಕ್ಷಕರು ಮತ್ತು ಬಡ ಮಕ್ಕಳ ಪಾಲಿನ ಆಶಾಕಿರಣ, ಸ್ಕಾಲರ್ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಕೆ. ನಾರಾಯಣ ನಾಯಕ್ ಇವರಿಗೆ ಈ ವರ್ಷದ ವೈಬ್ರೆಂಟ್ ಶಿಕ್ಷಣ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 84 ರ ಇಳಿವಸ್ಸಿನಲ್ಲಿಯೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ತೆರಳಿ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಿಸಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ದೊರಕಿಸಿ ಕೊಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೆ ಅವರ ಮಾಸಿಕ ಪಿಂಚಣಿಯ ಶೇ. 50% ಭಾಗವನ್ನು ಬಡಮಕ್ಕಳ ಶಿಕ್ಷಣಕ್ಕೆ ಬಳಸುತ್ತಿದ್ದಾರೆ. ಇವರ ನಿಸ್ವಾರ್ಥ ಶೈಕ್ಷಣಿಕ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ಈ ಒಂದು ಪ್ರಶಸ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಶಿಕ್ಷಕರಿಗೆ ಉತ್ತಮ ಶಿಕ್ಷಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಎಸ್. ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್ , ಆಡಳಿತಾಧಿಕಾರಿ ಅರುಣ್ ಡಿಸಿಲ್ವ ವೇದಿಕೆಯಲಿದ್ದರು .
ಕನ್ನಡ ವಿಭಾಗದ ಉಪನ್ಯಾಸಕಿ ಅಪರ್ಣಾ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಕು. ವರ್ಷಾ ಆರ್ ಕಾರ್ಯಕ್ರಮ ನಿರೂಪಿಸಿದರು. ಕು. ಸಹನ ಸ್ವಾಗತಿಸಿದರು. ಪ್ರಚೇತ್ ಡಿ. ವಂದನಾರ್ಪಣೆಗೈದರು.












