ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ಆರ್ಥಿಕವಾಗಿ ಹಿಂದುಳಿದ 26 ವಿದ್ಯಾರ್ಥಿಗಳಿಗೆ 2006ನೇ ಸಾಲಿನ 10ನೇ ತರಗತಿಯ ‘ಸಿ’ ವಿಭಾಗದ 56 ಮಂದಿ ಹಿರಿಯ ವಿದ್ಯಾರ್ಥಿಗಳ ತಂಡವು ಸಮವಸ್ತ್ರಕ್ಕಾಗಿ ಆರ್ಥಿಕ ನೆರವು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಗಾವಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಸುರೇಶ್ ಅವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಕೈಗೊಂಡಿರುವ ಈ ಸಮಾಜಮುಖಿ ಯೋಜನೆಯನ್ನು ಅಭಿನಂದಿಸಿದರು.
ಹಿರಿಯ ವಿದ್ಯಾರ್ಥಿ ಹಾಗೂ ಬ್ಯಾಂಕ್ ಆಫ್ ಬರೋಡಾದ ಉದ್ಯೋಗಿಯಾಗಿರುವ ಶ್ರೀ ಶಿವಪ್ರಸಾದ್ ಅವರು ಮಾತನಾಡಿ, “ನಾವು ಕಷ್ಟಪಟ್ಟು ಬದುಕಿದ ಹಿಂದಿನ ಜೀವನಕ್ಕೂ ಇಂದಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಈ ಏಳಿಗೆಗೆ ನಮ್ಮ ಶಿಕ್ಷಕರು ಹಾಗೂ ಹೆತ್ತವರೇ ಪ್ರಮುಖ ಕಾರಣ” ಎಂದು ಹೇಳಿದರು.
ಇನ್ನೋರ್ವ ಹಿರಿಯ ವಿದ್ಯಾರ್ಥಿ ಹಾಗೂ ಸೆಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ನೆಲ್ಸನ್ ಮಾತನಾಡಿ, “ಹಿರಿಯ ವಿದ್ಯಾರ್ಥಿಗಳ ವತಿಯಿಂದ ಅನೇಕ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಇದು ನಮ್ಮ ಮೊದಲ ಯೋಜನೆಯಾಗಿದೆ” ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿ ಶ್ರೀ ಪ್ರಸಾದ್ ಅವರು ಮಾತನಾಡಿ, “ಒಂದು ಗಿಡವನ್ನು ನೆಟ್ಟು ಅದು ಬೆಳೆದು ಫಲ ನೀಡಲು ಹಲವು ವರ್ಷಗಳ ಕಾಲ ಕಾಯಬೇಕು. ಅದೇ ರೀತಿ ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಪಾಲಿಸಿದರೆ ಖಂಡಿತವಾಗಿಯೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ. ಟಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶ್ರೀ ತಾರೇಶ್, ಪ್ರವೀಣ್, ಶ್ರೀ ರಮೇಶ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪರಮೇಶ್ವರ್ ಉಪಸ್ಥಿತರಿದ್ದರು.
10ನೇ ‘ಸಿ’ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕರಾದ ಶ್ರೀರಾಮ್ ವಂದಿಸಿದರು. ರವೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












