ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಕೊಡಮಾಡುವ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆ ಪುತ್ತಿಲ ಇಲ್ಲಿನ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜ್ಞಾನ,ಅದನ್ನು ಪಡೆಯುವ ರೀತಿ, ಗುರಿಯನ್ನು ಸಾಧಿಸುವ ರೀತಿ, ಶಾಂತಿವನ ಟ್ರಸ್ಟ್ ಕೊಡಮಾಡುವ ಪುಸ್ತಕದಲ್ಲಿ ಸಿಗುವ ಜೀವನ ಅನುಭವಗಳು,ನೈತಿಕ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ, ಸ್ನೇಹಿತರ ಆಯ್ಕೆ,ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಉಳಿಸುವ ರೀತಿ ಇತ್ಯಾದಿಗಳನ್ನು ಬಹಳ ಮಾರ್ಮಿಕವಾಗಿ ಹಲವು ಉದಾಹರಣೆಗಳ ಮುಖಾಂತರ ವಿವರಿಸಿದರು.
ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವರು ಈ ಪುಸ್ತಕಗಳು ಬದುಕಿಗೆ ಬೇಕಾದ ಎಲ್ಲಾ ವಿಚಾರಗಳನ್ನು ಧಾರೆ ಎರೆದು ಕೊಡುತ್ತಿದೆ. ಗುರಿ ತಲುಪಲು ಹಾದಿ ತೋರಿಸುತ್ತದೆ.ಜೀವನಕ್ಕೆ ಬೇಕಾದ ಎಲ್ಲಾ ಮೌಲ್ಯಗಳನ್ನು ಬೊಗಸೆಯೊಡ್ಡಿ ಕೊಡುತ್ತಿದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಶಾಲಾ ವಿದ್ಯಾರ್ಥಿನಿ ಕುಮಾರಿ ಶ್ರೇಯ ಡಿ. ಪಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಅನ್ಸಾ ಸ್ವಾಗತಿಸಿ, ಆರುಷ್ ಪಿ ಜೋಶಿ ಅತಿಥಿಗಳ ಕಿರು ಪರಿಚಯ ಮಾಡಿದರು. ಕುಮಾರಿ ಸಿಂಚನ ಧನ್ಯವಾದ ಇತ್ತರು. ಬಳಿಕ ಶ್ಲೋಕ, ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಿ ಬಹುಮಾನವನ್ನು ನೀಡಲಾಯಿತು.












