ಎ.3ರಿಂದ ಎ.7: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya


ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.3ರಿಂದ ಎ.7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎಂ ದಯಾಕರ್ ಭಟ್ ಉಜಿರೆ ಹೇಳಿದರು.
ಅವರು ಮೇ.25ರಂದು ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಎ.4ರಂದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ನೆರವೇರಿಸುವರು ಅಧ್ಯಕ್ಷತೆಯನ್ನು ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿದ್ದಾರೆ ಎಂದರು.
ಎ.೫ರಂದು ನಡೆಯುವ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ ವಹಿಸಲಿದ್ದಾರೆ. ಎ.6ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಶುಭಾಶಂಸನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಲಕಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕರಾದ ಹರೀಶ್ ಪೂಂಜ ವಹಿಸಲಿದ್ದಾರೆ. ಎರಡು ದಿನಗಳಲ್ಲೂ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಎ.4ರಂದು ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಎ.೫ರಂದು ದೇವಿಕಿರಣ್ ಕಲಾನಿಕೇತನ ಗುರುವಾಯನಕೆರೆ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪ್ರಥ್ವಿ ಸತೀಶ್ ಶಿಷ್ಯದವರಿಂದ ನೃತ್ಯಾಪರ್ಣಂ ಕಾರ್ಯಕ್ರಮ ಎ.6ರಂದು ಸಂಜೆ ಪಲ್ಲವಿ ಕಲಾವಿದೆರ್ ಕಾರ್ಕಳ ಇವರಿಂದ ಶಿವಭಕ್ತಗೆ ಮಾರ್ಕಂಡೇಯೇ ಪೌರಾಣಿಕ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ. ರಾತ್ರಿ ಅಗ್ನಿಗುಳಿಗ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ದಾನಿಗಳ ಸಹಕಾರದಲ್ಲಿ ಅನ್ನದಾನ ನಡೆಯಲಿದೆ ಎಂದು ವಿವರಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ ಸಾಲಿಯಾನ್ ಅವರು ಮಾಹಿತಿ ನೀಡಿ, ಕ್ಷೇತ್ರದ ಹಿನ್ನೆಲೆಯನ್ನು ತಿಳಿಸಿ, ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ, ಶಾಸಕ ಹರೀಶ್ ಪೂಂಜರಿಂದ ತಡೆಗೋಡೆ ನಿರ್ಮಾಣಕ್ಕೆ ರೂ.7ಲಕ್ಷ ಮತ್ತು ಎಂಎಲ್‌ಸಿ ಪ್ರತಾಪಸಿಂಹ ನಾಯಕ್‌ರಿಂದ ರೂ.5 ಲಕ್ಷ ಅನುದಾನ ದೊರಕಿದೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ರೂ. 3 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಎ.೪ರಂದು ಬೆಳಗ್ಗೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಗಣಪತಿ ವಿಗ್ರಹ, ಶ್ರೀ ನಾರಾಯಣ ಗುರುಗಳ ಮರದ ಪೀಠವನ್ನು ಮೇಲಂತಬೆಟ್ಟು, ಕಳಿಯ, ನಡ, ಪಡಂಗಡಿ, ಕರ್ನೋಡಿ, ಮುಂಡೂರು, ಸವಣಾಲು, ಲಾಯಿಲ, ಬೆಳ್ತಂಗಡಿ ನಗರ ಮತ್ತು ಕುವೆಟ್ಟು ಗ್ರಾಮಸ್ಥರಿಂದ ಹಸಿರುವಾಣಿಯ ಭವ್ಯ ಮೆರವಣಿಗೆಯೊಂದಿಗೆ ಚೆಂಡೆ-ಕೊಂಬು ವಾಲಗದೊಂದಿಗೆ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹೊರಟು ಬೆಳ್ತಂಗಡಿಯ ರಾಜಬೀದಿಯ ಮೂಲಕ ದೇವಸ್ಥಾನಕ್ಕೆ ಬಂದು ಹೊರಕಾಣಿಕೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಧರ್ಮದರ್ಶಿ ಯೋಗೀಶ್ ಪೂಜಾರಿಯವರು ಮಾತನಾಡಿ, ಸುಬ್ರಹ್ಮಮಣ್ಯ, ಮಾಣಿಲ ಸ್ವಾಮೀಜಿಯವರು, ಧರ್ಮಸ್ಥಳದ ಖಾವಂದರ ಪೂರ್ಣ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಭಕ್ತರು ಹಗಲು-ರಾತ್ರಿ ಶ್ರಮದಾನದ ಕಾರ್ಯ ಮಾಡುತ್ತಿದ್ದಾರೆ. ದೇವಸ್ಥಾನದ ಬ್ರಹ್ಮಲಕಶೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನ ೮೧ ಗ್ರಾಮಗಳ ಭಕ್ತರು ಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಲಾಯಿಲ, ಕೋಶಾಧಿಕಾರಿ ಪ್ರಶಾಂತ್ ಕುದ್ಯಾಡಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಸ್ವಾಗತ ಸಮಿತಿ ಸಂಚಾಲಕ ಚಂದ್ರರಾಜ್ ನೂಜೆಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯೋಗೀಶ್ ಕುಲಾಲ್ ಪಕ್ಕಿದಕಲ ಉಪಸ್ಥಿತರಿದ್ದರು.

Leave a Comment

error: Content is protected !!