ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್‌ರಿಂದ ಹೇವಾಜೆ ಶಾಲೆಗೆ ಯಾವುದೇ ಅನುದಾನ ಮಂಜೂರಾಗಿಲ್ಲ: ಮಾಹಿತಿ ಹಕ್ಕಿನಲ್ಲಿ ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್

Suddi Udaya

ಶಿಶಿಲ: 2022-23 ಮತ್ತು 2023- 24ನೇ ಸಾಲಿನಲ್ಲಿ ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿ ಪ್ರಸಾದ್ ಇವರ ಯೋಜನೆಯಡಿ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಲಿಖಿತ ಮಾಹಿತಿ ನೀಡಿದ್ದಾರೆ.


ಶಿಶಿಲ ಗ್ರಾಮದ ಪಡ್ಪು ಮನೆ ನಿವಾಸಿ ಕೊರಗಪ್ಪ ಗೌಡ ಇವರು ಮಾಹಿತಿ ಹಕ್ಕಿನಲ್ಲಿ ಕೇಳಿದ ಮಾಹಿತಿಗೆ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಮಾಹಿತಿಯನ್ನು ನೀಡಿದ್ದು, ಅಧಿಕಾರಿ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್‌ರವರು ಮಾಧ್ಯಮಗಳಿಗೆ ನೀಡಿದ ತಮ್ಮ ಪರಿಚಯದ ವಿವರದಲ್ಲಿ ವಿಧಾನ ಪರಿಷತ್ ಮತ್ತು ಸಂಸದರ ಸಂಪರ್ಕ ಮಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಅನುದಾನ ನೀಡಿದ ವಿವರ ನೀಡಿದ್ದರು. ಇದರಲ್ಲಿ ಶಿಶಿಲದ ಹೇವಾಜೆ ಶಾಲೆಗೆ ರೂ. 2ಲಕ್ಷ ಅನುದಾನ ಕೊಟ್ಟಿರುವುದಾಗಿ ನಮೂದಿಸಲಾಗಿದ್ದು, ಇದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಕೊರಗಪ್ಪ ಗೌಡರವರು ರಕ್ಷಿತ್ ಶಿವರಾಂ ಹೇವಾಜೆ ಶಾಲೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿರುವ ವಾಯ್ಸ್ ರೆಕಾರ್ಡ್ ಕೂಡಾ ನಂತರ ವೈರಲ್ ಆಗಿತ್ತು.
ಈ ಬಗ್ಗೆ ರಕ್ಷಿತ್ ಶಿವರಾಂ ಕಡೆಯಿಂದ ಮಂಜೂರಾತಿ ಪತ್ರ ನೀಡಿದ್ದನ್ನು ಸ್ಥಳೀಯ ಪತ್ರಿಕೆ ಪ್ರಕಟಿಸಿತ್ತು. ಇದರ ನಂತರದ ಬೆಳವಣಿಗೆಯಾಗಿ ಕೊರಗಪ್ಪ ಗೌಡರು ಮಾಹಿತಿ ಹಕ್ಕಿನಲ್ಲಿ ಈ ವಿವರನ್ನು ಕೇಳಿದ್ದು, ಬಿ.ಕೆ ಹರಿಪ್ರಸಾದ್‌ರವರಿಂದ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲ ಎಂದು ಅಧಿಕಾರಿ ಕೊಟ್ಟಿರುವ ಲಿಖಿತ ಉತ್ತರ ಈಗ ಇದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

Leave a Comment

error: Content is protected !!