30.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ಚಾರ್ಮಾಡಿಯಲ್ಲಿ ಮತದಾನ ವಿಳಂಬ : ಡಿ ಮಸ್ಟರಿಂಗ್ ಕೇಂದ್ರ ಕ್ಕೆ ಹೊರಟ ವಾಹನ ತಡೆಗಟ್ಟಿದ ಜನರ‌ ಮೇಲೆ ಪೊಲೀಸರ ಲಾಠಿಚಾರ್ಜ್ : ಹಲವಾರು ಮಂದಿಗೆ ಗಾಯ

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾಗಿ ಮುಗಿದು ಡಿ ಮಸ್ಟರಿಂಗ್ ಕೇಂದ್ರಕ್ಕೆ ಹೊರಟ ವಾಹವನ್ನು ಜನರು ತಡೆಗಟ್ಟಿದ ಘಟನೆ ಮೇ 10 ರಾತ್ರಿ ನಡೆದಿದ್ದು, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಇದರಿಂದಾಗಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾದ ಘಟನೆ ನಡೆದಿದೆ.

ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಾರ್ಮಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಸಂಖ್ಯೆ 21, 22,23 ಮತಗಟ್ಟೆಗಳಿವೆ. ಇಲ್ಲಿನ 21ನೇ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿತ್ತು. ನಂತರ ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡಿದ ಕಾರಣದಿಂದ ಬೆಳಗ್ಗೆ ಮತದಾನ ಪ್ರಕ್ರಿಯೆ ಸುಮಾರು 3 ತಾಸು ತಡವಾಗಿ ಆರಂಭವಾಗಿತ್ತು, ಈ ಮೂರು ಬೂತ್‌ಗಳಲ್ಲಿ ಮತಯಂತ್ರಗಳು ಅತ್ಯಂತ ನಿಧಾನವಾಗಿ ಕಾರ್ಯನಿರ್ವಹಿಸಿದ ಕಾರಣ ಮತದಾರರು ಹಲವು ತಾಸು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕಾಯಿತು.
ಮತದಾನ ಮುಗಿಯುವ ನಿಗದಿತ ಸಮಯ 6 ಗಂಟೆಗೆ 150ಕ್ಕಿಂತಲೂ ಅಧಿಕ ಮತದಾರರು ಮತಗಟ್ಟೆಯಲ್ಲಿದ್ದು ರಾತ್ರಿ 7.45ರವರೆಗೆ ಮತದಾನ ಪ್ರಕ್ರಿಯೆ ಮುಂದುವರಿಯಿತು.


ಅಂತಿಮ ಪ್ರಕ್ರಿಯೆ ನಡೆಸಿ ಪಕ್ಷಗಳ ಏಜೆಂಟ್ ಗಳನ್ನು ಹೊರ ಕಳುಹಿಸಿದ ಬಳಿಕ ಸುಮಾರು ಒಂದು ತಾಸು ಕಾಲ ಸಿಬ್ಬಂದಿಗಳು ಮತಗಟ್ಟೆಯಲ್ಲಿ ನಡೆದ ಮತದಾನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬರೆಯಲು ಮುಂದಾದರು. ಈ ಸಮಯ ವಿದ್ಯುತ್ ಕೈಕೊಟ್ಟದ್ದರಿಂದ ಕೆಲಸಕ್ಕೆ ತಡೆಯಾಗಿ ಅಧಿಕಾರಿಗಳು ಮೊಬೈಲ್‌ನ ಬೆಳಕಿನಲ್ಲಿ ದಾಖಲೆ ಬರೆದಾಗ, ಹೊರಗಡೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತವಾಗಿ ಸೇರಿದ್ದ ಜನರು ಗಲಾಟೆ ಮಾಡಲಾರಂಭಿಸಿದರು. ಇದೇ ವೇಳೆ ಕೆಲವೊಂದು ಅಪಪ್ರಚಾರಗಳು ಜನರನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತು. ರಾತ್ರಿ 9.30ರ ಹೊತ್ತಿಗೆ ಡಿಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ವಾಹನ ಹೊರಡುತ್ತಿದ್ದಂತೆ ವಾಹನವನ್ನು ಅಡ್ಡಗಟ್ಟಿದ ಜನರು, ಏಜೆಂಟ್‌ಗಳನ್ನು ಹೊರ ಕಳುಹಿಸಿ ಪ್ರಕ್ರಿಯೆ ಮುಂದುವರಿಸಿದ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಮತದಾನದಲ್ಲಿ ಅವ್ಯವಹಾರ ನಡೆಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳದಲ್ಲಿ ಜನಜಮಾಯಿಸಿ ವಾಗ್ವಾದ ನಡೆಸಿದರು.
ಲಾಠಿ ಚಾರ್ಜ್ :
ಚುನಾವಣೆಯ ಮತಯಂತ್ರಗಳನ್ನು ಹೊತ್ತ ಬಸ್ಸನ್ನು ಹೋಗಲು ಬಿಡದೆ ಅಡ್ಡಗಟ್ಟಿದ ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಮನವಿ ಮಾಡಿದರು. ಸ್ಥಳಕ್ಕೆ ಚುನಾವಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು, ಹೆಚ್ಚುವರಿ ಪೊಲೀಸರನ್ನು ತರಿಸಲಾಯಿತು. ಆದರೆ ಜನ ಜಮಾಯಿಸಿ ವಾಹನ ಹೋಗದಂತೆ ಮತ್ತೂ ತಡೆಯೊಡ್ಡಿದಾಗ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ನಡೆಸಿದರು. ಈ ಸಂದರ್ಭ ಲಾಠಿ ಏಟು ಹಾಗೂ ಓಡುವ ಸಂದರ್ಭ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಕಾರ್ಯಕರ್ತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೈ ಕೊಟ್ಟ ವಿದ್ಯುತ್:
ಮತದಾನದ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುವ ಹೊತ್ತಿಗೆ ವಿದ್ಯುತ್ ಕೈಕೊಟ್ಟಿದ್ದು ಪ್ರಕ್ರಿಯೆ ಪೂರ್ಣಗೊಳಿಸಲು ತಡವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಾಹನ ತಡೆಗಟ್ಟಿದ ಹಾಗೂ ಲಾಠಿಚಾರ್ಜ್ ಸಮಯದಲ್ಲೂ ವಿದ್ಯುತ್ ಇಲ್ಲದಿದ್ದ ಕಾರಣ ಕತ್ತಲು ಆವರಿಸಿದ್ದು ಸ್ಥಳದಲ್ಲಿ ಜಮಾಯಿಸಿದ್ದ ಜನರ ಕಡೆ ಪೊಲೀಸರು ಲಾಠಿ ಬೀಸಿದ್ದು ಅಮಾಯಕರು ಪೆಟ್ಟು ತಿನ್ನುವಂತಾಯಿತು. ಚಾರ್ಮಾಡಿ ಮತಗಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇದ್ದು ರಸ್ತೆ ಉದ್ದಕ್ಕೂ ಜನ ಜಮಾಯಿಸಿದ್ದ ಕಾರಣ ಸಾಕಷ್ಟು ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಯಾವುದೇ ರೀತಿಯಲ್ಲಿ ಮತ ಪೆಟ್ಟಿಗೆ ಹೋಗುವ ವಾಹನಕ್ಕೆ ತೊಂದರೆ ನೀಡದ ಬಿಜೆಪಿ ಕಾರ್ಯಕರ್ತರಿಗೆ ಲಾಠಿ ಬೀಸಲಾಗಿದೆ. ಇದರಿಂದ ಅಮಾಯಕರು ಪೆಟ್ಟು ತಿಂದು ಆಸ್ಪತ್ರೆಗೆ ಸೇರುವಂತಾಗಿದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

Related posts

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

Suddi Udaya

ಕ್ಯಾನ್ ಫಿನ್ ಹೋಮ್ ಲಿ.ನಿಂದ ಸಿ.ಎಸ್.ಆರ್ ಫಂಡ್ ಹಸ್ತಾಂತರ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಸಂತಾಪ

Suddi Udaya

ಕಕ್ಕಿಂಜೆ: ಖ್ಯಾತ ಮೇಸ್ತ್ರಿ ಕೆಲಸಗಾರ ಮೊಯಿದಿನ್‌ಕುಂಞಿ ಮೋಣುಚ್ಚ ನಿಧನ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಹೋಮ ಮತ್ತು ಭತ್ತದ ತೆನೆ ವಿತರಣೆ

Suddi Udaya

ಗುರುವಾಯನಕೆರೆ: ಶ್ರೀಮತಿ ಶಾಂತಾ ಪ್ರಭು ನಿಧನ

Suddi Udaya
error: Content is protected !!