July 23, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಗಾರಕ್ಕೆ ಚಾಲನೆ

ಉಜಿರೆ: ಮಾ. 06 ರಂದು ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಪದವಿ ಕೇಂದ್ರದ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ‘ಯುವ ಮನಸ್ಸುಗಳನ್ನು ಸಶಕ್ತಗೊಳಿಸುವುದು: ಸಂಶೋಧನಾ ವಿಧಾನ ಮತ್ತು ಪ್ರಾಜೆಕ್ಟ್ ಕಾರ್ಯ’ ವಿಷಯದಡಿಯಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಉದಯಚಂದ್ರ ಪಿ.ಎನ್. ದೀಪ ಪ್ರಜ್ವಲಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿಯೊಂದು ಅಧ್ಯಾಯನ ಹಾಗು ಸಂಶೋಧನೆಗೆ ತನ್ನ ಗುರಿ ಮತ್ತು ಉದ್ದೇಶ ಅತ್ಯಂತ ಅವಶ್ಯ. ವಿದ್ಯಾರ್ಥಿಗಳು ವಿನೂತನ ಆಲೋಚನೆ ಹಾಗು ನಿರಂತರ ಅಧ್ಯಯನದ ಮೂಲಕ ಹೊಸ ಜ್ಞಾನ ಪರಂಪರೆಯನ್ನು ಕಟ್ಟಿಕೊಡಬೇಕು. ಅಧ್ಯಾಯನದ ಹಾದಿಯನ್ನು ಸ್ಪಷ್ಟಪಡಿಸಿ ಸುಸ್ಥಿರ ಬದಲಾವಣೆ ಕಡೆಗೆ ಹೆಜ್ಜೆ ಹಾಕಬೇಕು. ವಿದ್ಯಾರ್ಥಿಗಳ ಸಂಶೋಧನಾ ವಿಷಯಗಳು ಹೊಸ ಒಳವುಗಳನ್ನು ಪರಿಚಯಿಸುವುದರ ಜೊತೆಗೆ ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ, ಮುಂದಿನ ತಲೆಮಾರಿಗೆ ಉಪಯುಕ್ತವಾಗುವ ವಿಷಯಗಳು ಆಯ್ಕೆಯಾಗಲಿ.

ನಿರ್ದಿಷ್ಟ ವಿಷಯದ ಕುರಿತು ಆಳವಾದ ಪ್ರಬುದ್ಧತೆಯನ್ನು ಹೊಂದಿ ವಿಚಾರವಂತರಾಗುವುದರ ಜೊತೆಗೆ ಕೌಶಲ್ಯಾಧರಿತ ಅಧ್ಯಾಯನ ಮತ್ತು ಸಂಶೋಧನೆಗಳಿಂದ ಮಾತ್ರ ಉತ್ಕೃಷ್ಟ ಭವಿಷ್ಯ ಮತ್ತು ಯುವ ಭಾರತ ನಿರ್ಮಾಣವಾಗಲು ಸಾಧ್ಯ. ದೇಶ ಸುಸ್ಥಿರವಾಗುವ ಮುನ್ನ ನಾವು ಶಿಕ್ಷಣದ ಮೂಲಕ ಸದೃಢರಾಗಬೇಕು ಎಂದು ಯುವ ಜನರನ್ನು ಪ್ರೇರೆಪಿಸುವ ವಿಶೇಷ ಕಾರ್ಯಕ್ರಮದ ಆಯೋಜಕರಿಗೆ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ. ಮಾತನಾಡಿ, ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ದಶಕಗಳ ಹಿಂದೆ ಶಿಕ್ಷಣದಲ್ಲಿ ಪದವಿ ಮುಗಿಸಿಕೊಂಡು ಬಂದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಇಂದು ಪದವಿಯ ಜೊತೆಗೆ ಕೌಶಲ್ಯ ಮತ್ತು ತಂತ್ರಜ್ಞಾನದ ಅರಿವನ್ನು ಹೊಂದಿರುವವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಶಿಕ್ಷಣ ಎನ್ನುವುದು ಕೇವಲ ಪಠ್ಯದ ಅಧ್ಯಾಯನವಲ್ಲ ಇದೊಂದು ಬಹುಮುಖ ಜ್ಞಾನಾರ್ಜನೆ, ಪ್ರಯೋಗಾಲಯ, ವಿವಿಧ ವಿಷಯಗಳ ಕುರಿತು ಪ್ರಬುದ್ಧರಾಗುವ ವೇದಿಕೆ. ಇಂತಹ ವಿಚಾರ ಸಿರಿವಂತಿಕೆಯನ್ನು ಸಾಧಿಸಲು‌ ಸಂಶೋಧನೆ, ಚರ್ಚೆ, ವಿಚಾರ ಸಂಕಿರಣ, ಕಾರ್ಯಾಗಾರದಂತಹ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರ ಭಾಗವಾಗಿ ಎರಡು ದಿನಗಳ ಸಶಕ್ತ ಯುವ ಸಮುದಾಯದ ತಯಾರಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕ ಬೆಳವಣಿಗೆಯನ್ನು ಸಾಧಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಎಸ್.ಡಿ.ಎಂ ಸಂಸ್ಥೆಯ ವತಿಯಿಂದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕಾರ್ಯಕ್ರಮದ ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯ , ಸ್ನಾತಕೋತ್ತರ ಕೇಂದ್ರದ ಕಾಮರ್ಸ್ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ ಎಸ್.ವಿ., ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸವೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗವರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಿಂಚನ ಮತ್ತು ತಂಡದವರು ಪ್ರಾರ್ಥನೆ ಹಾಡಿ, ವಿದ್ಯಾರ್ಥಿನಿ ಸುಶ್ಮಿತಾ ಹೊಳ್ಳ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಕುಮಾರಿ ಶಿವಾನಿ ಮತ್ತು ಸಿಂಚನ ನಿರೂಪಿಸಿ , ವಿದ್ಯಾರ್ಥಿನಿ ಕುಮಾರಿ ಸಂಜನಾ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ. ಸುರೇಶ್ ಬಾಬು, ಹರ್ಷಿತ್ ಕುಮಾರ್, ಮಮತ, ಸುಪ್ರಿಯಾ ಮತ್ತು ಶ್ವೇತಾ ಸಂಯೋಜಿಸಿದರು.

ಪ್ರಾಜೆಕ್ಟ್ ಪ್ರಪೋಸಲ್ ಪ್ರೆಸೆಂಟೇಶನ್ ಸ್ಪರ್ಧೆ : ಎರಡು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಮದಲ್ಲಿ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನೆ, ಸಂಶೋಧನಾ ಸಾಮರ್ಥ್ಯ ಮತ್ತು ಪ್ರಸ್ತುತಿಕರಣ ಕೌಶಲ್ಯಗಳನ್ನು ಉತ್ತೇಜಿಸಲು ಪ್ರಾಜೆಕ್ಟ್ ಪ್ರಪೋಸಲ್ ಪ್ರೆಸೆಂಟೇಶನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿ : ಎರಡು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಉಜಿರೆಯ ಎಸ್.ಡಿ.ಎಂ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಪಾಲುದಾರರಾಗುವ ಜೊತೆಗೆ ಮೈಸೂರಿನ ಜೆಎಸ್ಎಸ್ ಕಾಲೇಜು, ಶಿವಮೊಗ್ಗದ ಪಿಇಎಸ್ಐಎಎಮ್ಎಸ್ ಕಾಲೇಜು, ಹೊನ್ನಾವರದ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಂಗಳೂರಿನ ಕೆನರಾ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನುರಿತ ತಜ್ಞರಿಂದ ಪ್ರಧಾನ ಉಪನ್ಯಾಸ : ಎರಡು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅನೇಕ ಜನ ಉಪನ್ಯಾಸಕು ಸೇರಿದಂತೆ‌ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ಸಂಶೋಧನಾ ವಿಧಾನಶಾಸ್ತ್ರದ ಮೂಲಭೂತ ಅಂಶ, ಸಂಶೋಧನೆಗೆ ಪರಿಚಯದ ಕುರಿತು ಮೈಸೂರಿನ GSSS ಕಾಲೇಜಿನ ಪ್ರಾಂಶುಪಾಲರು ಡಾ. ರಾಕೇಶ್ ಟಿ.ಎಸ್., ಸಂಶೋಧನಾ ವಿಧಾನಶಾಸ್ತ್ರ ವಿಷಯದ ಕುರಿತು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಸಂಖ್ಯಾಶಾಸ್ತ್ರ ಮುಖ್ಯಸ್ಥೆ ಶುಭರೇಖಾ, ದತ್ತಾಂಶ ವಿಶ್ಲೇಷಣೆ ಮತ್ತು ವಿವರಣೆ ಕುರಿತು ಉಜಿರೆಯ ಎಸ್.ಡಿ.ಎಂ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕೆ, ಸಂಶೋಧನಾ ವರದಿ ಬರವಣಿಗೆ ಕುರಿತು ಬೆಂಗಳೂರು CMR Universityಯ ಸಂಶೋಧನಾ ಮಾರ್ಗದರ್ಶಕ ಡಾ. ಚಿದಾನಂದ ಎಚ್.ಎಲ್. ಪ್ರಧಾನ ಉಪನ್ಯಾಸ ನೀಡಲಿದ್ದಾರೆ.

Related posts

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿದ್ವತ್ ಪಿಯು ಕಾಲೇಜಿಗೆ ಮತ್ತೊಂದು ಗರಿ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯು ‘ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯಮಟ್ಟದ ಶಾಲಾ ಪ್ರಶಸ್ತಿ’ಗೆ ಆಯ್ಕೆ

Suddi Udaya

ಮುಂಡ್ರುಪ್ಪಾಡಿ ಸ.ಕಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಛತ್ರಿ ವಿತರಣೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಉಜಿರೆ ಶ್ರೀ ಧ.ಮಂ.ಪ ಪೂ.ಕಾಲೇಜು: ವಿಶ್ವ ಯೋಗ ದಿನಾಚರಣೆ

Suddi Udaya

ನಾಳೆ(ಜ.11): ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮಿತ್ತ ವಿಶೇಷ ಕಾರ್ಯಾಗಾರ:ಎಕ್ಸೆಲ್ ಬೆಳಕು ಫೌಂಡೇಶನ್ಉಚಿತ ಶಿಕ್ಷಣ ಯೋಜನೆ ಬಗ್ಗೆ ವಿಸ್ಕೃತ ಮಾಹಿತಿ ನೀಡಲಿದ್ದೇವೆ: ಸುಮಂತ್ ಕುಮಾರ್ ಜೈನ್:ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ,ಕಾರ್ಯಾಗಾರವೂ ಮಧ್ಯಾಹ್ನ 2:00 ರಿಂದ ಸಂಜೆ 4:30 ರ ವರೆಗೆ ಜರುಗಲಿದೆ

Suddi Udaya
error: Content is protected !!