ಬಳ್ಳಮಂಜ ಬಸದಿಯಲ್ಲಿ 37ನೇ ವರ್ಷದ ವಾರ್ಷಿಕೋತ್ಸವ: ಧಾರ್ಮಿಕ ಸಭೆ

Suddi Udaya

ಮಚ್ಚಿನ: ಬದುಕು ಮತ್ತು ಬದುಕಲು ಬಿಡು ಎಂಬುದು ಜೈನ ಧರ್ಮದ ವಿಶೇಷ ತತ್ವವಾಗಿದೆ. ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ, ಸ್ಯಾದ್ವಾದ ಮೊದಲಾದ ಅನೇಕ ಉದಾತ್ತ ತತ್ವ-ಸಿದ್ಧಾಂತಗಳ ಸಾರವಾದ ಜೈನಧರ್ಮವು ವಿಶ್ವ ಧರ್ಮವಾಗಿದೆ. ಜೈನರ ಆಚಾರ-ವಿಚಾರಗಳು ಮತ್ತು ಜೈನರಿಗೆ ಎಲ್ಲೆಡೆ ವಿಶೇಷ ಗೌರವ, ಮಾನ್ಯತೆ ಇದೆ ಎಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ಧರಣೇಂದ್ರ ಜೈನ್ ಹೇಳಿದರು.

ಅವರು ಮೇ 16ರಂದು ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜದಲ್ಲಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಮೂವತ್ತೇಳನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರö್ಯ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ಅಹಿಂಸೆ, ದಯೆ, ಅನುಕಂಪ, ಪರೋಪಕಾರ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ವೃತ-ನಿಯಮಗಳ ಪಾಲನೆ ಮಾಡಿ ಸರಳ, ಸಾತ್ವಿಕ ಜೀವನ ನಡೆಸಬೇಕು. ಧರ್ಮದ ಮರ್ಮವನ್ನರಿತು ಬದುಕಿದಾಗ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಹೊಸ್ಮಾರು ಗುಮ್ಮೆತ್ತು ಬಸದಿಯ ಸಂಚಾಲಕ ಎನ್. ಪ್ರೇಮ್ ಕುಮಾರ್ ಮಾತನಾಡಿ, ಧರ್ಮದ ಆಚರಣೆಯೊಂದಿಗೆ ದಾನಧರ್ಮಾದಿ ಸತ್ಕಾರ್ಯಗಳೊಂದಿಗೆ ಸಮಾಜಸೇವೆ ಮಾಡುವುದು ತನ್ನ ದಿನಚರಿಯಾಗಿದೆ. ಊರಿನ ಬಸದಿಯಲ್ಲಿ ವಿಶೇಷ ಪೂಜೆ, ಆರಾಧನೆಗಳು ನಡೆದಾಗ ಸಮಾಜದಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ.

ದೇವರು, ಗುರುಗಳು ಮತ್ತು ಶಾಸ್ತ್ರದ ಬಗ್ಗೆ ನಮಗೆ ಆದರಾಭಿಮಾನ ಇರಬೇಕು. ಮನೆಯಲ್ಲಿ ಹಿರಿಯರು, ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಇತ್ತೀಚೆಗೆ ನಿಧನರಾದ ಬಸದಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಕೆ. ಬಿ. ಮಹಾವೀರ ಬಳ್ಳಾಲ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಐದು ಬಾರಿ ಪಂಚನಮಸ್ಕಾರ ಮಂತ್ರ ಪಠಣ ನಡೆಸಲಾಯಿತು.

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಲಶಾಭಿಷೇಕ, ಅಷ್ಟ ವಿಧಾರ್ಚನೆ ಪೂಜೆ, ಅಳಿಯೂರು ಆದಿರಾಜ ಜೈನ್ ಮತ್ತು ನಿರಂಜನ ಜೈನ್ ಅವರಿಂದ ಜಿನ ಭಜನೆ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.

ನಿವೃತ್ತ ಪ್ರಾಂಶುಪಾಲ ಕೆ. ರಾಜವೀರ ಇಂದ್ರ ಮತ್ತು ಉಪ್ಪಿನಂಗಡಿಯ ಉದ್ಯಮಿ ವಜ್ರಕುಮಾರ್ ಉಪಸ್ಥಿತರಿದ್ದರು.

ಸುರೇಶ್ ಕುಮಾರ್ ಸ್ವಾಗತಿಸಿದರು. ನಿವೃತ ಶಿಕ್ಷಕ ರಘುಚಂದ್ರ ಚೌಟ ಧನ್ಯವಾದವಿತ್ತರು.

Leave a Comment

error: Content is protected !!