ಮೂಲಗೇಣಿದಾರರಿಗೆ ಸರಕಾರ ಶೀಘ್ರವೇ ನ್ಯಾಯ ಒದಗಿಸಲಿ: ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಕರ್ನಾಟಕದಲ್ಲಿ 2012 ರಲ್ಲಿ ಇದ್ದ ಬಿಜೆಪಿ ಸರಕಾರ ಡಾ.ವಿ.ಎಸ್.ಆಚಾರ್ ಅವರ ವಿಶೇಷ ಮುತುವರ್ಜಿಯಲ್ಲಿ ಕರಾವಳಿಯ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ನೀಡುವ ಕುರಿತು ಕರ್ನಾಟಕ ಕಾಯ್ದೆ ಸಂಖ್ಯೆ 24/2012 ನ್ನು ರೂಪಿಸಿತ್ತು. ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಸಂಪೂರ್ಣ ಮಾಲಕತ್ವ ಪ್ರದಾನ ಮಾಡುವ ಅಧಿನಿಯಮ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ 11158/2013 ಮತ್ತು ಇತರ ಅರ್ಜಿಗಳನ್ನು ಹೈಕೋರ್ಟ್ ಗೆ ಮೂಲಿದಾರರು ಸಲ್ಲಿಸಿದ್ದರು .

ರಾಜ್ಯ ಸರಕಾರದ ಈ ಅಧಿನಿಯಮ ಮಾಡುವ ಅಧಿಕಾರವನ್ನು ಪ್ರಶ್ನಿಸಿ, ಮೂಲಿದಾರರು ತಮ್ಮ ಮೂಲಭೂತ ಹಕ್ಕುಗಳಿಗೆ ಇದು ವಿರುದ್ಧವಾಗಿದೆ ಎಂದು ಪ್ರತಿಪಾದನೆ ಮಾಡಿದರು. ಈ ರಿಟ್ ಅರ್ಜಿಗಳನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿ ಸರಕಾರಕ್ಕೆ ಈ ಕುರಿತು ಅಧಿನಿಯಮವನ್ನು ಮಾಡುವ ಅಧಿಕಾರವಿದೆ ಎಂದು ತೀರ್ಪು ನೀಡಿದೆ.

ಇದರಿಂದಾಗಿ ದಶಕಗಳಿಂದ ಸಂಪೂರ್ಣ ಹಕ್ಕಿಗಾಗಿ ಕಾಯುತ್ತಿರುವ ಕರಾವಳಿಯ ಸಾವಿರಾರು ಮೂಲಗೇಣಿದಾರರಿಗೆ ಅಧಿಕಾರ ಸಿಗುವ ದಿಕ್ಕಿನಲ್ಲಿ ದಾರಿ ಸುಗಮವಾಗಿದೆ. ಸರಕಾರ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮುಂದಿನ ಮೊದಲ ಅಧಿವೇಶನದಲ್ಲಿಯೇ ಪರಿಹಾರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಮೂಲ ಗೇಣಿದಾರರಿಗೆ ನ್ಯಾಯ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಯಾವುದೇ ಕಾರಣಕ್ಕೆ ವಿಳಂಬನೀತಿ ಅನುಸರಿಸದೆ ತಕ್ಷಣ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ಆಗ್ರಹಿಸಿದ್ದಾರೆ.

Leave a Comment

error: Content is protected !!