ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ- 2023’ ಸಮಾರೋಪ ಸಮಾರಂಭ

Suddi Udaya

ಉಜಿರೆ ಶ್ರೀ ಧ. ಮಂ ಕಾಲೇಜು ಇಲ್ಲಿನ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ 2023’ ಸಮಾರೋಪ ಸಮಾರಂಭ ನಡೆಯಿತು. 

 ಈ ಸಂದರ್ಭ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ದಿವಂಗತ ಡಾ. ಬಿ ಯಶೋವರ್ಮರವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಭಾಗದ ಉಪನ್ಯಾಸಕ ಲೆಫ್ಟಿನೆಂಟ್ ಭಾನುಪ್ರಕಾಶ್ ಮಾತನಾಡಿ ತಂತ್ರಜ್ಞಾನ, ಮಾಹಿತಿ ಮತ್ತು ಆಧುನಿಕತೆಯ ಉಪಯೋಗವನ್ನು ಸಂಸ್ಥೆಯ ಬೆಳವಣಿಗೆಗೆ ಅಳವಡಿಸಿಕೊಂಡ ವೈಖರಿ ಹಾಗೂ ವಿದ್ಯಾರ್ಥಿಗಳ ಮೇಲಿನ ಅವರ ಪ್ರೀತಿಯನ್ನು ನೆನಪಿಸಿಕೊಂಡರು. ಡಾ. ಬಿ ಯಶೋವರ್ಮ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಶಾಂತಿ ಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ವಿಷಯಗಳನ್ನು ಅರ್ಥ ಮಾಡಿಕೊಂಡು ವ್ಯವಹಾರ ನಿರ್ವಹಣೆಯಲ್ಲಿ ವ್ಯವಹಾರ ಮೌಲ್ಯಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.‌ 

  ಮುಖ್ಯ ಅತಿಥಿಯಾಗಿ ಮುಂಬೈನ ಯುವ ಉದ್ಯಮಿ ಸುರೇಶ್ ಪೂಜಾರಿ ಭಾಗವಹಿಸಿದರು‌.

 ಈ ಸಂದರ್ಭ ಬೇರೆ ಬೇರೆ ಕಾಲೇಜುಗಳಿಂದ ಇಪ್ಪತ್ತು ತಂಡಗಳು ಭಾಗವಹಿಸಿದ್ದು, ಮಾನವ ಸಂಪನ್ಮೂಲ ನಿರ್ವಹಣೆ, ಉತ್ತಮ ನಿರ್ವಹಣೆ, ಹಣಕಾಸು ನಿರ್ವಹಣೆ ಕಾರ್ಯಕ್ರಮ ನಿರ್ವಹಣೆ, ಛಾಯಾಗ್ರಹಣ, ರಸಪ್ರಶ್ನೆ, ಮಾರುಕಟ್ಟೆ ನಿರ್ವಹಣೆ ಸೇರಿದಂತೆ ಏಳು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 

 ಪ್ರತಿ ಸ್ಪರ್ಧೆಯಲ್ಲಿಯೂ ಗೆದ್ದ ಎರಡು ತಂಡಗಳಿಗೆ ಹಾಗೂ ಸಮಗ್ರ ಬಹುಮಾನ ಪಡೆದ ಮಂಗಳೂರಿನ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯಕ್ಕೆ ಪ್ರಥಮ ಹಾಗೂ ಎಮ್.ಎ.ಪಿ.ಎಸ್ ಕಾಲೇಜಿಗೆ ದ್ವಿತೀಯ ಬಹುಮಾನಗಳನ್ನು ವಿತರಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನ್ ಶಕುಂತಲಾ ಸ್ವಾಗತಿಸಿದರೆ, ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ನ ಕೋಶಾಧಿಕಾರಿ ಪರೀಕ್ಷಿತ್ ಗೋಖಲೆ ವಂದಿಸಿದರು. ವಿಭಾಗದ ವಿದ್ಯಾರ್ಥಿಗಳಾದ ಶ್ರಾವ್ಯ, ಶ್ರವಣ್ ಜೈನ್, ಅಕ್ಷಯ್ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!