ಉಜಿರೆ: ಸಂಸ್ಥೆಗಳ ಅಟೆಂಡರ್ಸ್ ನವರು ಕೇವಲ ಉದ್ಯೋಗಿಗಳಲ್ಲ. ಅವರು ಸಂಸ್ಥೆಯನ್ನು ಕಾಯುವ ಪ್ರಮುಖ ಹೊಣೆಗಾರಿಕೆಯುಳ್ಳವರೂ ಆಗಿರುತ್ತಾರೆ. ಸಂಸ್ಥೆಗೆ ನೌಕರರಾಗಿ ಸೇರಿದ ಬಳಿಕ ಅವರು ಸಂಸ್ಥೆಗಾಗಿ ತ್ಯಾಗಕ್ಕೂ ಸಿದ್ಧರಿರಬೇಕು. ಏಕೆಂದರೆ ಸಂಸ್ಥೆ ನಮಗೆ ಜೀವನ ಕಲ್ಪಿಸಿಕೊಟ್ಟಿದೆ. ಹಾಗಾಗಿ ವೃತ್ತಿ ಕೀಳರಿಮೆ ಬೇಡ, ಗೌರವವನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಎಸ್ ಡಿ ಎಂ ಸಂಸ್ಥೆ ವಿಭಿನ್ನವಾಗಿ ಬೆಳೆಯುವುದಕ್ಕೆ, ಗುರುತಿಸಿಕೊಳ್ಳುವುದಕ್ಕೆ ಕಾರಣವೇ ಸಂಸ್ಥೆಯ ನೌಕರರ ವೃತ್ತಿಶೀಲ ದುಡಿಮೆಯಿಂದ ಎಂದು ಉಜಿರೆ ಶ್ರೀಧ ಮಂ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್ ರವರು ನುಡಿದರು.
ಅವರು ಶ್ರೀ ಧ ಮಂ ಎಜ್ಯುಕೇಶಲ್ ಸೊಸೈಟಿ ವತಿಯಿಂದ ತನ್ನ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಜರಗಿದ ವ್ಯಕ್ತಿತ್ವ ವಿಕಸನದ ಕಾರ್ಯಾಗಾರದ ಸಮಾರೋಪ ಭಾಷಣಗಾರರಾಗಿ ಆಗಮಿಸಿದ್ದರು.
ವ್ಯಕ್ತಿತ್ವ ವಿಕಸನದ ಕಾರ್ಯಾಗಾರವನ್ನು ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ ಜೇಸಿಐನ ರಾಜ್ಯ ತರಬೇತುದಾರರೂ ಆಗಿರುವ ಸತೀಶ್ ಭಟ್ ಬಿಳಿನೆಲೆಯವರು ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪ್ರಾಂಶುಪಾಲರುಗಳಾದ ಡಾ. ಕುಮಾರ್ ಹೆಗ್ಡೆ, ಡಾ. ಅಶೋಕ್ ಕುಮಾರ್, ಡಾ. ಪ್ರಶಾಂತ್ ಶೆಟ್ಟಿ, ಡಾ. ಪ್ರಮೋದ್ ಕುಮಾರ್, ಸುನಿಲ್ ಪಂಡಿತ್, ಡಾ. ವಿಶ್ವನಾಥ್ ನಿವೃತ್ತ ಪ್ರಾಚಾರ್ಯರಾದ ಡಾ. ಜಯಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು. ಶ್ರೀಧ ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಸ್ವಾಗತಿಸಿ ತರಬೇತುದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಬಿ ಸೋಮಶೇಖರ ಶೆಟ್ಟಿಯವರು ಕಾರ್ಯಾಗಾರದ ಹಿಮ್ಮಾಹಿತಿಯೊಂದಿಗೆ ಧನ್ಯವಾದ ಸಲ್ಲಿಸಿ, ಬೆಳಾಲು ಶ್ರೀ ಧ ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ನಿರೂಪಿಸಿದರು.