ದ..ಕ. ಜಿಲ್ಲಾ ಕ.ಸಾ.ಪ. ವತಿಯಿಂದ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಅರಸ್ ಜನ್ಮದಿನಾಚರಣೆ

Suddi Udaya

ಉಜಿರೆ: ನಾಲ್ವಡಿ ಕೃಷ್ಣರಾಜ ಒಡೆಯರ್ ಒಬ್ಬ ಶ್ರೇಷ್ಠ ದಾರ್ಶನಿಕ, ಪ್ರಜಾಹಿತ ಚಿಂತಕರು, ಶೈಕ್ಷಣಿಕ, ವೈಜ್ಞಾನಿಕ ಸಂಸ್ಥೆಗಳ ಸ್ಥಾಪಕರು.  ಅವರು  ತಮ್ಮ ರಾಜ್ಯದ ಹಾಗೂ ಜನತೆಯ ಬಗ್ಗೆ ವಿಶೇಷ ಕಾಳಜಿ ಹಾಗೂ ಗೌರವ ಹೊಂದಿದ್ದರು. ದೂರದೃಷ್ಟಿ ಹಾಗೂ ಬದ್ಧತೆಯ ಆಡಳಿತಕ್ಕೆ ಹೆಸರಾದ  ಅವರು ಕನ್ನಡ ಮತ್ತು ಕರ್ನಾಟಕ ರಾಜ್ಯದ ಸಮಗ್ರ  ಅಭಿವೃದ್ದಿಯ  ಹರಿಕಾರರು.  ಅನೇಕ ಶಿಕ್ಷಣ ಸಂಸ್ಥೆಗಳ ಸಹಿತ ಸಮಾಜಕ್ಕೆ ಉಪಯೋಗವಾಗುವ ಅನೇಕ ಸಂಸ್ಥೆಗಳನ್ನು ಆರಂಭಿಸಿದ ಅವರು 1915ರಲ್ಲೇ  ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದವರು  ಎಂದು  ಉಜಿರೆ ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಆಡಳಿತ  ಕುಲಸಚಿವ ಪ್ರೊ.ಎಸ್.ಎನ್. ಕಾಕತ್ಕರ್ ಹೇಳಿದರು.
ಅವರು ಜೂ  4 ರಂದು  ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಧೀಮಂತ್ -ಧೀಮಹಿ ವಸತಿ ನಿಲಯದ ಸಭಾಂಗಣದಲ್ಲಿ ದ ಕ.ಜಿಲ್ಲಾ ಕ.ಸಾ.ಪ. ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರರ  139ನೇ ಜಯಂತ್ಯುತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  


ಅಧ್ಯಕ್ಷತೆ ವಹಿಸಿದ್ದ ಕ ಸಾ ಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ವ್ಯಕ್ತಿಯಲ್ಲ ಮಹಾನ್  ಶಕ್ತಿ, ಚೇತನ, ಎಲ್ಲ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿದ್ದರು. ಅವರ ಆಶಯದಂತೆ ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿ ಹಾಗೂ ಜನರ ಬಳಿ ಹೋಗಿ ಅನೇಕ ಕಾರ್ಯಕ್ರಮಗಳನ್ನು  ಆಯೋಜಿಸುವ   ಪ್ರಯತ್ನ ನಡೆಸುತ್ತಿದೆ ಎಂದರು. ಉಪನ್ಯಾಸ ನೀಡಿದ ಎಸ್ ಡಿ ಎಂ ಪ ಪೂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಶ್ ಬಿ. ನಾಲ್ವಡಿ ಕೃಷ್ಣರಾಜ ಅರಸ್ ತಾಯಿ  ನೀಡಿದ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳೊಂದಿಗೆ ಬೆಳೆದ ವಿಶಿಷ್ಟ ವ್ಯಕ್ತಿ,ಕನ್ನಡ ಸಾಹಿತ್ಯ,ಸಂಸ್ಕೃತಿಯ ಸಂರಕ್ಷಕ.ಮಾನವೀಯ ಅಂತಃಕರಣ ಹೊಂದಿದ್ದ ಅವರು ಪ್ರಜೆಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಅನೇಕ ಕವಿಗಳಿಗೆ ಆಶ್ರಯದಾತರಾಗಿ  ದೇವದಾಸಿ ಪದ್ಧತಿ, ಬಸವಿ,ಗೆಜ್ಜೆ ಪದ್ಧತಿ,ಬಾಲ್ಯ ವಿವಾಹ  ನಿಷೇಧ,ವಿಧವಾ ವಿವಾಹ,ಅನಿಷ್ಟ ಪದ್ಧತಿಗಳನ್ನು ದೂರ ಮಾಡಿ, ಪ್ರಜಾಪ್ರತಿನಿಧಿ ಸಭೆ ಅನುಷ್ಠಾನಕ್ಕೆ ತಂದವರು ಎಂದರು.ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿ ಬಿ.ಸೋಮಶೇಖರ ಶೆಟ್ಟಿ ಶುಭಾಶಂಸನೆಗೈದರು .

ನಾಲ್ವಡಿ ಕೃಷ್ಣರಾಜ ಅರಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.
ಕ.ಸಾ.ಪ  ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು.ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ  ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!