ಶ್ರೀ ಕೃಷ್ಣ ಭಗವದ್ಗೀತೆ ಬೋಧನೆ ಮೂಲಕ ಗುರುವಾದ, ವಸುದೇವ ದೇವಕಿಗೆ ನೀಡಿದ ಪರಮಾನಂದದಿಂದ ಜಗದ್ಗುರು ಎನಿಸಿಕೊಂಡ ಪರಮಾತ್ಮನಾದ.ಯಾವ ವಿದ್ಯಾರ್ಥಿಗಳು ತಂದೆ, ತಾಯಿ,ಗುರುಗಳಿಗೆ ಭಕ್ತಿ,ಪ್ರೀತಿ, ವಿಧೇಯತೆ ತೋರುವರೋ ಅಂತವರು ಉತ್ತರೋತ್ತರ ಅಭಿವೃದ್ದಿ ಹೊಂದುವರು. ಮೌಲ್ಯತುಂಬಿದ ಬದುಕು ಎಲ್ಲಕ್ಕಿಂತ ಶ್ರೇಷ್ಠ. ದುರ್ಗುಣಗಳಿಂದ ದೂರ ಇದ್ದು ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ತಪ್ಪಾಗದಂತೆ ಸಾಗುವ ಮನಸ್ಥಿತಿ ಬೆಳಿಸಿಕೊಳ್ಳಬೇಕು.ವಾದ -ವಿವಾದದಲ್ಲಿ ದಿನ ಕಳೆಯದೆ ಕೆಲಸದ ಮೂಲಕ ಸಾಧನೆ ತೋರುವವರಾಗಬೇಕು ,ಮಾತಿಗಿಂತ ಮೌನವೇ ಬೆಲೆಯುಳ್ಳದ್ದು ಎಂಬಂತೆ ಎಲ್ಲಿ ಅವಶ್ಯವೋ ಅಲ್ಲಿ ಮಾತ್ರವೇ ಮಾತಿರಲಿ.ಅಂಕ ಗಳಿಕೆಯೊಂದಿಗೆ ಮೌಲ್ಯಧಾರಿತ ಬದುಕಿನ ಗಳಿಕೆಯು ಬಹುಮುಖ್ಯ ಎಂದು ಎಸ್. ಡಿ.ಎಮ್ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶ್ರೀಧರ್ ಎನ್ ಭಟ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ‘ಮೌಲ್ಯಧಾರಿತ ತರಗತಿಗಳ ಉದ್ಘಾಟನೆ’ ನೆರವೇರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್ ಇವರು ಎಸ್. ಡಿ. ಎಮ್. ಸಂಸ್ಥೆ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವರ್ಷಪೂರ್ತಿ ಮೌಲ್ಯಯುತ ಕಾರ್ಯಕ್ರಮಗಳನ್ನು ನಡೆಸಲಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಹಾಗೂ ಬದುಕಲ್ಲಿ ಅಳವಡಿಸಿಕೊಳ್ಳಿ ಎಂದರು.

ಕಾಲೇಜಿನ ನಿಲಯ ಪಾಲಕರು ಹಾಗೂ ದೈಹಿಕ ಶಿಕ್ಷಕರಾಗಿರುವ ಲಕ್ಷ್ಮಣ್ ಗೌಡ ಜಿ. ಉಪಸ್ಥಿತರಿದ್ದರು.
ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.















