ಪೆರಿಂಜೆ ಪಡ್ಯಾರಬೆಟ್ಟ ಕ್ಷೇತ್ರದಿಂದ ಪುಸ್ತಕ ವಿತರಣೆ

Suddi Udaya

ವೇಣೂರು : ಮಕ್ಕಳ ಜ್ಞಾನಕ್ಕೆ ಬೆಳಕನ್ನು ನೀಡುವ ಕಾರ್ಯ ಪಡ್ಡ್ಯಾರಬೆಟ್ಟ ಕ್ಷೇತ್ರದಿಂದ ನಿರಂತರ ನಡೆಯುತ್ತಿರುವುದು ಶ್ಲಾಘನೀಯ. ದೈವದ ಪ್ರಸಾದವೆಂಬಂತೆ ಮಕ್ಕಳು ಪುಸ್ತಕಗಳನ್ನು ಸ್ವೀಕರಿಸಿದ್ದಾರೆ. ಕಳೆದ 31 ವರ್ಷಗಳಿಂದ ವಿದ್ಯೆಗೆ ಪೂರಕವಾಗಿರುವ ಸೇವಾಕಾರ್ಯ ಮಾಡುತ್ತಿರುವ ಇಲ್ಲಿಯ ಧರ್ಮದರ್ಶಿಗಳು ಎಳೆಯ ಮಕ್ಕಳಿಗೆ ಸಂಸ್ಕಾರವನ್ನೂ ಧಾರೆಯೆರೆಯುತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಪೆರಿಂಜೆ ಸಂತೃಪ್ತಿ ಸಭಾಭವನದಲ್ಲಿ ಜೂ.12ರಂದು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದ ವತಿಯಿಂದ ಹೊಸಂಗಡಿ, ಬಡಕೋಡಿ, ಮರೋಡಿ ಮತ್ತು ಕೊಕ್ರಾಡಿ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ ಮತ್ತು ವಿವಿಧ ಶಾಲೆಗಳಗೆ ಅತಿಥಿ ಶಿಕ್ಷಕರ ನಿಯೋಜನೆ ಕಾರ್ಯಕ್ರಮದಲ್ಲಿ ಅವರು ಪುಸ್ತಕ ವಿತರಿಸಿ ಮಾತನಾಡಿದರು.

ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರರಾದ ಎ. ಜೀವಂಧರ ಕುಮಾರ್ ಅವರು ಮಾತನಾಡಿ, ಇಂದು ೩೨ನೇ ವರ್ಷದ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ವಿದ್ಯಾದಾನ ಎಲ್ಲಕ್ಕಿಂತ ಮಿಗಿಲು ಅನ್ನುವ ನಂಬಿಕೆ ನಮ್ಮದು. ವಿದ್ಯೆ ಜೀವನಪರ್ಯಾಂತ ಶಾಸ್ವತವಾಗಿ ನೆಲೆ ನಿಲ್ಲುತ್ತದೆ ಎಂದರು. ಸುಲ್ಕೇರಿ ಶ್ರೀರಾಮ ಶಾಲೆಗೆ ರೂ. 50 ಸಾವಿರ ಮೊತ್ತದ ಸಹಾಯಹಸ್ತ ನೀಡಲಾಯಿತು. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜ ಅವರನ್ನು ಕ್ಷೇತ್ರದ ವತಿಯಿಂದ ಸಮ್ಮಾನಿಸಲಾಯಿತು. ಮಾರೂರು ಖಂಡಿಗದ ವೇ|ಮೂ| ರಾಮದಾಸ ಅಸ್ರಣ್ಣ ಆಶೀರ್ವಚನ ನೀಡಿದರು. ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಪೆರಾಡಿ ಪ್ರಾ.ಕೃ.ಪ. ಸಹಕಾರ ಸಂಘದ ನಿರ್ದೇಶಕ ಪ್ರಗತಿಪರ ಕೃಷಿಕ ಎನ್. ಸೀತಾರಾಮ ರೈ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ, ಪೆರಿಂಜೆಗುತ್ತುವಿನ ಪ್ರಸನ್ನ ಪಡ್ಡಂದಡ್ಕ, ವಿಶ್ವಾಸ್ ಜೈನ್ ಬಾಲ್ನಗುತ್ತು, ಕ್ಷೇತ್ರದ ಗುತ್ತುಬರ್ಕೆಯವರು ಉಪಸ್ಥಿತರಿದ್ದರು. ಎ. ಜೀವಂಧರ ಕುಮಾರ್ ಸ್ವಾಗತಿಸಿ, ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿದರು. ವಿಕಾಸ್ ಜೈನ್ ಬಾಲ್ನಗುತ್ತು ವಂದಿಸಿದರು.

Leave a Comment

error: Content is protected !!