ಉಜಿರೆ: ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಆಸ್ಪತ್ರೆಗೆ ದಶಮಾನೋತ್ಸವ ಸಂಭ್ರಮ

Suddi Udaya

ಉಜಿರೆ:ಹಳ್ಳಿಯ ಜನರ ಆರೋಗ್ಯ ರಕ್ಷಣೆ ಗೋಸ್ಕರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉಜಿರೆಯಲ್ಲಿ ಆರಂಭಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹತ್ತು ವರ್ಷಗಳನ್ನು ಪೂರೈಸಿದ್ದು, ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲಾ ಅರ್ಹತೆಗಳೊಂದಿಗೆ ಹಂತ ಹಂತವಾಗಿ ಬೆಳೆದು ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ಎಂ.ಡಿ. ಜನಾರ್ದನ್ ಹಾಗೂ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಹೇಳಿದರು.

ಅವರು ಶನಿವಾರ ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಡಯಾಲಿಸಿಸ್ ಸೆಂಟರ್ ನಲ್ಲಿ 5,000 ಕ್ಕಿಂತ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 6.50 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಎಸ್ ಕೆ ಡಿ ಆರ್ ಡಿ ಪಿ ವತಿಯಿಂದ 22 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದರು.


ಸಿಟಿ ಸ್ಕ್ಯಾನ್ ಹೊಂದಿರುವ ತಾಲೂಕಿನ ಏಕೈಕ ಆಸ್ಪತ್ರೆಯಾಗಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಯೆನೆಪೋಯ ಆಸ್ಪತ್ರೆಯೊಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚಿನ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಅಲ್ಲಿನ ಜನರಿಗೆ ಅನುಕೂಲ ನೀಡಲಾಗಿದೆ. ಕೋವಿಡ್ ಸಂದರ್ಭ ಒಂದು ಕೋಟಿ ರೂ.ನಷ್ಟು ಮೊತ್ತವನ್ನು ಜನಹಿತ ಕಾರ್ಯಗಳಿಗೆ ಉಪಯೋಗಿಸಲಾಗಿದೆ ಎಂದರು.

ಲೆಕ್ಕ ಪತ್ರ ವಿಭಾಗದ ಅಧಿಕಾರಿ ನಾರಾಯಣ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು

Leave a Comment

error: Content is protected !!