ಮಲವಂತಿಗೆ: ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಸಾವು

Suddi Udaya

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಗುತ್ಯಡ್ಕ ಸಮೀಪ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನೇತ್ರಾವತಿ ಉಗಮ ಸ್ಥಾನಕ್ಕೆ ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಜೂ.30 ರಂದು ನಡೆದಿದೆ.

ಮೈಸೂರಿನ ಜೆಪಿ ನಗರದ ನಿವಾಸಿ ರಕ್ಷಿತ್ (27ವ. ) ಮೃತಪಟ್ಟ ಯುವಕನಾಗಿದ್ದು ತನ್ನ ಇತರ ಐವರು ಗೆಳೆಯರೊಂದಿಗೆ ಹೊರನಾಡಿಗೆ ಬಂದಿದ್ದು ಅಲ್ಲಿಂದ ಶುಕ್ರವಾರ ನೇತ್ರಾವತಿ ಉಗಮ ಸ್ಥಾನದ ಕಡೆ ಚಾರಣ ಹೊರಟಿದ್ದರು.

ಸಂಸೆ ಮೂಲಕ ಸಾಗಿ ಎಳನೀರು ಗಡಿ ದಾಟಿ ನಾಲ್ಕು ಕಿ.ಮಿ. ಚಾರಣ ನಡೆಸಿದಾಗ ತೀವ್ರ ಎದೆ ನೋವಿನಿಂದ ಬಳಲಿದ ಯುವಕನನ್ನು ತಂಡದ ಇತರ ಸದಸ್ಯರ ಜತೆ ಸ್ಥಳೀಯರು ಹೊತ್ತು ತಂದು ಕಳಸ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಯುವಕ ಮೃತಪಟ್ಟಿರುವುದು ತಿಳಿದುಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಸಮೀಪ ಇರುವ ಈ ಸ್ಥಳ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಆರಂಭದಲ್ಲಿ ಕಳಸ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಘಟನೆ ನಡೆದ ಸ್ಥಳ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದು ಬೆಳ್ತಂಗಡಿ ಪೊಲೀಸರು ಕಳಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!