September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು: ಎಂ.ಎಲ್‌.ಸಿ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ರಾಜ್ಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು. ಅವರ ಭಾಷಣದಲ್ಲಿ ಮುಂದಿನ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಹೇಗೆ ಎಂಬ ಪರದಾಟದ ಚಿತ್ರಣ ಗೋಚರಿಸಿದೆ. ಹೀಗಾಗಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿದೆ ಎಂದು ರಾಜ್ಯ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೊಸ ಸರಕಾರ ಬಂದಾಗ ಜನರಿಗೆ ಹೊಸ ನಿರೀಕ್ಷೆಗಳಿರುತ್ತವೆ. ಆದರೆ ಯಾವುದೇ ಹೊಸ ಯೋಜನೆಗಳಿಲ್ಲದೆ ಹರಕೆ ಸಂದಾಯದಂತೆ ಭಾಷಣವಿತ್ತು. ಚುನಾವಣಾ ಸಂದರ್ಭದಲ್ಲಿ ನೀಡಿರುವ ಗ್ಯಾರಂಟಿಗಳನ್ನು ಪೂರೈಸಲು ಪರದಾಟ ಪಡುತ್ತಿರುವುದು ಈ ಭಾಷಣದಲ್ಲಿ ಪ್ರತಿಬಿಂಬಿತವಾಗಿದೆ. ಆಹಾರ ಭದ್ರತಾ ಅಡಿಯಲ್ಲಿ ೫ ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ ಎಂಬ ಅಂಶ ಭಾಷಣದಲ್ಲಿ ಪ್ರಸ್ತಾವಿಸಲಾಗಿದೆ. ಆದರೆ ಇದು ಈಗಾಗಲೇ ಕೇಂದ್ರ ಸರಕಾರ ನೀಡುತ್ತಿರುವುದು ಎಂಬ ವಿಚಾರ ಜನಸಾಮಾನ್ಯರಿಗೂ ಗೊತ್ತು. ಅದರೆ ಈ ಸರಕಾರ ಅದನ್ನು ಹೇಳುವುದಕ್ಕೇ ತಯಾರಿಲ್ಲ. ಸಿದ್ಧರಾಮಯ್ಯ ಸರಕಾರ ತನ್ನ ಸರಕಾರವೇ ಕೊಡುತ್ತಿದೆ ಎಂದು ರಾಜ್ಯಪಾಲರ ಮೂಲಕ ಹೇಳಿಸಿ ಕೃತಘ್ನತೆಯನ್ನು ತೋರಿಸಿದೆ. ಕೇಂದ್ರದ 5 ಕೆ.ಜಿ. ಅಕ್ಕಿ ಜೊತೆಗೆ 10 ಕೆ.ಜಿ. ಹೆಚ್ಚುವರಿ ಕೊಡುವ ಯಾವುದೇ ಪ್ರಸ್ತಾಪವನ್ನು ಇಟ್ಟಿಲ್ಲದಿರುವುದರಿಂದ ಅವರ ಅನ್ನಭಾಗ್ಯ ಯೋಜನೆ ಗ್ಯಾರಂಟಿ ವಿಫಲವಾಗಿದೆ. ಅಲ್ಲದೆ ಗೃಹ ಜ್ಯೋತಿ ಯೋಜನೆಯಲ್ಲಿ 200 ಯುನಿಟ್‌ ವಿದ್ಯುತ್‌ ನೀಡುವ ಅಂಶವನ್ನು ರಾಜ್ಯಪಾಲರ ಮೂಲಕ ಹೇಳಿಸಿದ್ದಾರೆ. ಅದರೆ ವಾಸ್ತವದಲ್ಲಿ ಉಚಿತ ವಿದ್ಯುತ್‌ ಪಡೆಯಲು ನಿರ್ಭಂಧಗಳನ್ನು ಹೇರಲಾಗಿದೆ. ಹೀಗಾಗಿ ಸರಕಾರ ರಾಜ್ಯಪಾಲರ ಮೂಲಕ ಸುಳ್ಳು ಹೇಳಿದೆ. ಭಾಷಣದಲ್ಲಿ ರಾಜ್ಯದ ಮುಂದಿನ ಹೊಸ ಅಭಿವೃದ್ದಿ ಯೋಜನೆಗಳ ಹಾಗೂ ಅರ್ಧದಲ್ಲಿ ಉಳಿದಿರುವ ಕಾಮಗಾರಿಗಳ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಒಟ್ಟು ಅಭಿವೃದ್ಧಿ ಯೋಜನೆಗಳು ಸಾಧ್ಯವಾಗಲಾರದು ಎಂಬುದು ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸಿದ್ದು ಸಾಹಿತ್ಯಕ ವಿಚಾರಗಳನ್ನು ತುರುಕುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಮಾಡಲಾಗಿದೆ ಎಂದರು. ಸಂವಿಧಾನದ ಆಶಯದಂತೆ ದೇಶದಲ್ಲಿ ಸಮಾನತೆ ಇರಲು ಸಮಾನ ನಾಗರಿಕ ಸಂಹಿತೆ ಜಾರಿಯ ಅಗತ್ಯ ಇದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ದೇಶದ ಸ್ವಾತಂತ್ರ್ಯೋತ್ಸವದ ಅಮೃತವರ್ಷಚಾರಣೆಯ ಸಂದರ್ಭದಲ್ಲಿ ಸಂಹಿತೆಯನ್ನು ಜಾರಿ ಮಾಡುವುದು ಸೂಕ್ತವೇ ಆಗಿದೆ. ಡಾ| ಬಿ. ಆರ್.‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಲ್ಲಿಯೂ ಸಮಾನ ನಾಗರಿಕ ಸಂಹಿತೆಯ ಪ್ರಸ್ತಾಪ ಇದೆ. ಉಚ್ಛನ್ಯಾಯಾಲಯವೂ ಹೇಳಿದೆ. ದೀರ್ಘಕಾಲದಿಂದ ಉಳಿದಿರುವ ಸಂಹಿತೆಯನ್ನು ಜಾರಿ ಮಾಡಲು ಇದು ಅಮೃತಕಾಲವಾಗಿದೆ. ಕೇಂದ್ರದಲ್ಲಿ ಪೂರ್ಣ ಬಹುಮತದ ಸರಕಾರ ಇರುವಾಗ ಸಂಹಿತೆ ಜಾರಿ ಮಾಡಬಹುದಾಗಿದೆ. ಸಮಗ್ರ ಭಾರತೀಯ ಸಮುದಾಯಕ್ಕೆ ಇದು ಅವಶ್ಯವಾಗಿದೆ. ದೇಶದಲ್ಲಿ ಎರಡು ಬಗೆಯ ಕಾನೂನುಗಳು ಇರುವ ಬದಲು ಒಂದೇ ಕಾನೂನು ಅಗತ್ಯ. ಇದರಿಂದ ಮಹಿಳಾ ಸಮುದಾಯದ ಸಶಕ್ತಿಕರಣ ಸಾಧ್ಯವಾಗಲಿದೆ. ಸಮಾಜದಲ್ಲಿ ತಾರತಮ್ಯದ ಭಾವನೆ ಹೋಗಲಿದೆ. ಆದರೆ ಕೆಲವರು ಸಂಹಿತೆಯ ವಿಚಾರಕ್ಕೆ ಕೋಮು ಬಣ್ಣ ಹಚ್ಚುತ್ತಿರುವುದು ದುರದೃಷ್ಟಕರ. ಸಂವಿಧಾನದ ಆಶಯ ಸರ್ವ ಸಮಾನತೆ ಹಾಗೂ ಜಾತ್ಯಾತೀತತೆ. ಇದು ಸಮಾನ ನಾಗರಿಕ ಸಂಹಿತೆಯ ಜಾರಿಯಿಂದ ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಭೇಟಿ

Suddi Udaya

ಶಾಸಕ ಸಿ.ಟಿ. ರವಿ ಮೇಲೆ ಕಾಂಗ್ರೆಸ್‌ ಗೂಂಡಾಗಳ ದಾಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರ ಖಂಡನೆ

Suddi Udaya

ಬಜಿರೆ-ಹೊಸಪಟ್ಣದಲ್ಲಿ ಹೊನಲು ಬೆಳಕಿನ ಪುರುಷರ 60ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನ ವಿವಿಧ ಘಟಕಗಳಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಎ.26: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: 16 ನಿರ್ದೇಶಕ ಸ್ಥಾನಕ್ಕೆ 41 ಮಂದಿ ಅಭ್ಯರ್ಥಿಗಳ ನಡುವೆ ಸ್ಪರ್ಧೆ

Suddi Udaya

ಬೆಳ್ತಂಗಡಿ : ಸರಕಾರಿ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya
error: Content is protected !!