ನೆರಿಯ ಹಿಂದೂ ರುದ್ರಭೂಮಿಗೆ ಪಂಚಾಯತ್ ಬಳಿ ಇರುವ ಕಂದಾಯ ಜಾಗವನ್ನು ಮೀಸಲಿರಿಸಿದ ತಹಶೀಲ್ದಾರರು: ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು

Suddi Udaya

ನೆರಿಯ : ನೆರಿಯ ಹಿಂದೂ ರುದ್ರಭೂಮಿ ಗೊಂದಲವನ್ನು ತಹಶೀಲ್ದಾರ್ ರವರು ಪಂಚಾಯತ್ ಬಳಿ ಇರುವ ಕಂದಾಯ ಜಾಗವನ್ನು ಮೀಸಲಿರಿಸುವ ಮೂಲಕ ಸಮಸ್ಯೆ ಪರಿಹರಿಸಿದ ಬಗ್ಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಮೃತ ದೇಹ ಇಟ್ಟು ಪ್ರತಿಭಟನೆಯನ್ನು ಜು 15 ರಂದು ನಡೆಸಿದರು. ಹಿಂದೂ ರುದ್ರಭೂಮಿ ನಿಗದಿಗೊಳಿಸದೇ ಮೃತ ದೇಹದ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಜು14 ರಂದು ನೆರಿಯ ಗ್ರಾಮದ ಜನತಾಕಾಲನಿ ನಿವಾಸಿ ಸಂಜೀವಗೌಡ ( 49ವ ) ರವರು ಮೃತ ಪಟ್ಟಿದ್ದು ಮೃತರ ಅಂತ್ಯ ಸಂಸ್ಕಾರ ನಡೆಸಲು ನೆರಿಯ ಗ್ರಾಮದಲ್ಲಿ ಹಿಂದೂ ರುದ್ರಭೂಮಿ ಇರದೇ ಇರುವುದರಿಂದ ನೆರಿಯ ಗ್ರಾಮ ಪಂಚಾಯತ್ ಎದುರುಗಡೆ ಅಂತ್ಯ ಸಂಸ್ಕಾರ ನಡೆಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಭೇಟಿ ನೀಡಿದಾಗ ಇವತ್ತೇ ಹಿಂದೂ ರುದ್ರಭೂಮಿಗೆ ಜಾಗ ಗುರುತಿಸಿಕೊಡಬೇಕು ಅದೇ ಜಾಗದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಈಗಾಗಲೇ ಇಟ್ಟಾಡಿ ಎಂಬಲ್ಲಿ ಹಿಂದೂರುದ್ರಭೂಮಿಗಾಗಿ ಜಾಗ ಮೀಸಲಿರಿಸಿದ ಸ್ಥಳವನ್ನು ತಹಶೀಲ್ದಾರ್ ಹಾಗೂ ಅಧಿಕಾರಿಗಳು ಪರಿಶೀಲಿಸುವ ಸಂದರ್ಭ ಸ್ಥಳೀಯ ಕೆಲವರು ಆ ಜಾಗದಲ್ಲಿ ಹಿಂದೂರುದ್ರಭೂಮಿ ಮಾಡಲು ವಿರೋಧ ವ್ಯಕ್ತಪಡಿಸಿದರಲ್ಲದೇ ಯಾವುದೇ ಕಾರಣಕ್ಕೂ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ರಸ್ತೆಗೆ ಅಡ್ಡಲಾಗಿ ಕೂತಾಗ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಪಂಚಾಯತ್ ಮುಂಭಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಮಾಡಲು ಮುಂದಾಗಿ ಪಂಚಾಯತ್ ಪಕ್ಕದಲ್ಲಿ ಸರ್ಕಾರಿ ಭೂಮಿ ಇದೆ ಅದನ್ನು ಹಿಂದೂ ರುದ್ರಭೂಮಿಗೆ ಮೀಸಲಿರಿಸಿ ಎಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಂಚಾಯತ್ ಬಳಿ ಇರುವ ಜಾಗವನ್ನು ಪರಿಶೀಲಿಸಿ ರುದ್ರಭೂಮಿಗೆ ಅಲ್ಲೆ ಮಾಡುವಂತೆ ಸೂಚಿಸಿದಾಗ ಗ್ರಾಮಸ್ಥರೆಲ್ಲ ಪ್ರತಿಭಟನೆಯನ್ನು ಹಿಂಪಡೆದು ಅದೇ ಜಾಗದಲ್ಲಿ ಸಂಜೀವ ಗೌಡ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ವ್ಯವಸ್ಥೆ ಮಾಡುವ ಮೂಲಕ ನೆರಿಯ ಹಿಂದೂ ರುದ್ರಭೂಮಿಯ ಪ್ರತಿಭಟನೆ ಸುಖಾಂತ್ಯಗೊಂಡಿದೆ.

Leave a Comment

error: Content is protected !!