ಉಜಿರೆ: ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ಹುಟ್ಟಿನಿಂದ ಸಾಯುವವರೆಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಂಸ್ಥೆಯಾಗಿದ್ದು,ಇದು ಜಗತ್ತಿನಾದ್ಯಂತ ಯಾವುದೇ ಜಾತಿ-ವಯೋ ಭೇದವಿಲ್ಲದೇ ತನ್ನ ಸೇವಾ ಕಾರ್ಯವನ್ನು ನಡೆಸುತ್ತಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಪ್ರೀ ಎ ಎಲ್ ಟಿ ಶ್ರೀಮತಿ ಸೇವಂತಿ ಬಿ ನುಡಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಕಾರ್ಫ್ ಡೇ ಯ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.ಸ್ಕೌಟ್ ಗೈಡ್ ಜೀವನದಲ್ಲಿ ಜವಾಬ್ಧಾರಿಯನ್ನು, ಶಿಸ್ತನ್ನು, ನಾಯಕತ್ವ ಕೌಶಲ್ಯವನ್ನು ಹಾಗೂ ಸಾಮಾಜಿಕ ಮುಂದಾಳತ್ವವನ್ನು ವಹಿಸಲು ಸ್ವಯಂ ಪ್ರೇರಣೆ ನೀಡುತ್ತದೆ.ಎಲ್ಲಾ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಯಾವತ್ತೂ ತನ್ನ ಬಗ್ಗೆ ಯೋಚಿಸದೇ ಸಮಾಜದ ಬಗ್ಗೆ ,ಸ್ವಾರ್ಥ ಬಿಟ್ಟು ಪರರ ಬಗ್ಗೆ ,ಪರೋಪಕಾರದ ಬಗ್ಗೆ ಸದಾ ಹಂಬಲಿಸುವ ಮನೋಭಾವವುಳ್ಳವರು ಹಾಗೂ ಇಂತಹ ಭಾವನೆಯನ್ನು ಸದಾ ಜಾಗೃತಗೊಳಿಸಿಕೊಂಡಿರುತ್ತಾರೆ ಹಾಗೂ ಸದಾ ಸೇವೆಗೆ ಕಂಕಣಬದ್ಧರಾಗಿರುತ್ತರೆ ಇದು ಸ್ಕೌಟ್ ಗೈಡ್ ಕಲಿಸುವ ಪಾಠ ಎಂದು ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಮಾತನಾಡಿ ಸ್ಕೌಟ್ ಗೈಡ್ ವಿದ್ಯರ್ಥಿಗಳಿಗೆ ಯಾವುದೇ ಆದೇಶದ ಅವಶ್ಯಕತೆ ಇಲ್ಲ ಯಾಕೆಂದರೆ ಅವರು ಯಾವತ್ತೂ ಯಾವುದಾದರೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮನ್ನು ತಾವೂ ಸದಾ ಕ್ರೀಯಾಶೀಲರಾಗಿ ಇಟ್ಟುಕೊಂಡಿರುತ್ತಾರೆ,ಇವರ ನಿಸ್ವಾರ್ಥ ಸೇವೆ ಸದಾ ಸ್ತುತ್ಯಾರ್ಹವಾಗಿದ್ದು ಇದೇ ರೀತಿ ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯನ್ನು ಬೆಳಸಿಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.
ವೇದಿಕೆಯ ಮೇಲೇ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಹಾಗೂ ರೇಂಜರ್ ಲೀಡರ್ಗಳಾದ ಲಕ್ಷ್ಮೀಶ್ ಭಟ್ ಹಾಗೂ ಶ್ರೀಮತಿ ಅಂಕಿತಾ ಎಮ್ ಕೆ ಉಪಸ್ಥಿತರಿದ್ದರು.ರೇಂಜರ್ ವಿದ್ಯಾರ್ಥಿನಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿ ರೋವರ್ ವಿದ್ಯಾರ್ಥಿ ಹಿತೇಶ್ ಬಿ ಪಿ ಸ್ವಾಗತಿಸಿದರು, ರೋವರ್ ವಿದ್ಯಾರ್ಥಿ ಆದಿತ್ಯ ಹೆಗಡೆ ಸ್ಕಾರ್ಫ್ ದಿನ ಆಚರಣೆಯ ಮಹತ್ವವನ್ನು ನೀಡಿದರು. ರೇಂಜರ್ ವಿದ್ಯಾರ್ಥಿನಿ ರಚನ್ವಿ ವಂದಿಸಿದರು.