ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಷ್ಠಾಪನೆಗೆ ಮೂಹೂರ್ತ ನಿಗದಿ: ಜ.21ರಿಂದ 3 ದಿನ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಭಾಗಿ

Suddi Udaya

ಅಯೋಧ್ಯೆ: ಭವ್ಯ ರಾಮಮಂದಿರದಲ್ಲಿ ಬಹು ನಿರೀಕ್ಷಿತ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ಕೂಡಿ ಬಂದಿದೆ. ಮುಂದಿನ ವರ್ಷ ಜನವರಿ 21, 22, ಅಥವಾ 23ರಂದು ಪ್ರತಿಷ್ಠಾಪನೆ ನೆರವೇರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದ್ದು ಅವರು ಬಹುತೇಕ ಪಾಲ್ಗೊಳ್ಳುವುದು ಖಚಿತವಾಗಿದೆ. ಆದರೆ ಮೂರು ದಿನಗಳ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮುಖ್ಯ ಕಾರ್ಯಕ್ರಮವನ್ನು ರಾಜಕೀಯೇತರವಾಗಿ ಇರಿಸಲಾಗುವುದು. ವಿವಿಧ ರಾಜಕೀಯ ಪಕ್ಷಗಳ ಅತಿಥಿಗಳನ್ನು ಸಹ ಆಹ್ವಾನಿಸಲಾಗುವುದು. ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ

ಕೋವಿಡ್-19 ಮಾರ್ಗಸೂಚಿಗಳ ಕಾರಣದಿಂದಾಗಿ ದೇವಾಲಯದ ಭೂಮಿ ಪೂಜೆ ಕಾರ್ಯ ಕ್ರಮವನ್ನು 2020ರ ಆಗಸ್ಟ್ 5ರಂದು ಸೀಮಿತ ಪ್ರಮಾಣದಲ್ಲಿ ನಡೆಸಲಾಗಿತ್ತು. ಈಗ ರಾಮಲಲ್ಲಾ ಗರ್ಭಗುಡಿ ಪೂರ್ಣಗೊಳ್ಳುವ ಹಂತದಲ್ಲಿದೆ. ಜನವರಿ ತಿಂಗಳಲ್ಲಿ ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು. ಇದಕ್ಕೆ ಭರದ ಸಿದ್ಧತೆ ಸಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

25,000ಕ್ಕೂ ಅಧಿಕ ಹಿಂದು ಮುಖಂಡರು ಭಾಗಿ

ಸಮಾರಂಭಕ್ಕೆ 136 ಸನಾತನ ಸಂಪ್ರದಾಯಗಳ 25,000ಕ್ಕೂ ಹೆಚ್ಚು ಹಿಂದು ಧಾರ್ಮಿಕ ಮುಖಂಡರನ್ನು ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ. ಸಂತರ ಪಟ್ಟಿಯನ್ನು ದೇವಾಲಯದ ಟ್ರಸ್ಟಿ ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಸಹಿಯೊಂದಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗುವುದು ಎಂದು ಚಂಪತ್ ರಾಯ್ ತಿಳಿಸಿದ್ದಾರೆ. ಅಯೋಧ್ಯೆಯ ದೊಡ್ಡ ಮಠಗಳಲ್ಲಿ ಎಲ್ಲಾ ಪ್ರಮುಖ ಸಂತರಿಗೆ ಉಳಿದುಕೊಳ್ಳುವ ಅವಕಾಶ ಕಲ್ಪಿಸಲು ಟ್ರಸ್ಟಿ ಯೋಜಿಸಿದೆ. 25,000 ಸಂತರು 10,000 ವಿಶೇಷ ಅತಿಥಿಗಳು ಸಮಾರಂಭ ವೀಕ್ಷಣೆ ಮಾಡಲಿದ್ದಾರೆ.

ಇಡೀ ತಿಂಗಳು ಉಚಿತ ಆಹಾರ: ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಸುಮಾರು ಒಂದು ತಿಂಗಳ ಕಾಲ ಉಚಿತ ಆಹಾರ ನೀಡಲು ಟ್ರಸ್ಟ್ ಮುಂದಾಗಿದೆ. ಟ್ರಸ್ಟ್ ವತಿಯಿಂದ ಇಡೀ ಜನವರಿ ತಿಂಗಳಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ಆಹಾರವನ್ನು ನೀಡಲಾಗುತ್ತದೆ.

Leave a Comment

error: Content is protected !!