ಕನ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya

ಕನ್ಯಾಡಿ: ಸರಕಾರಿ ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆ, ಕನ್ಯಾಡಿ-1 ಇಲ್ಲಿ 7ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ನೋಣಯ್ಯ ಗೌಡ, ಅತಿಥಿಗಳಾಗಿ ಆಗಮಿಸಿದ್ದ ಅಭಿನಂದನ್ ಹರೀಶ್ ಕುಮಾರ್, ಪಂಚಾಯತ್ ಸದಸ್ಯರುಗಳಾದ ಪ್ರವೀಣ್ ವಿ ಜೆ, ಜಯ ಶೆಟ್ಟಿ, ಶ್ರೀಮತಿ ಸುಮಿತ್ರ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಉಮಾವತಿ, ಕಪುಚಿನ್ ಸೇವಾ ಕೇಂದ್ರದ ಶ್ರೀಮತಿ ಲವೀನ ಜ್ಯೋತಿ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ಹನುಮಂತರಾಯ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ನಂತರ ಕಪುಚಿನ್ ಸೇವಾ ಕೇಂದ್ರದ ಶ್ರೀಮತಿ ಜ್ಯೋತಿ ಇವರು ವೇದಿಕೆ ಮುಂಭಾಗದಲ್ಲಿ ಹಿಂದಿನ ಕಾಲದ ವಿವಿಧ ವಸ್ತುಗಳು ಅವುಗಳ ಉಪಯೋಗಗಳ ಬಗ್ಗೆ ಮಕ್ಕಳು ತಿಳಿದಿರಬೇಕು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಪ್ರಸ್ತುತ ಸಾಲಿನಿಂದ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಗೆ ದಾನಿಗಳಾದ, ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್ ಇವರ ಪುತ್ರ ಅಭಿನಂದನ್ ಇವರು ಮಕ್ಕಳಿಗೆ ಬಾಂಡ್ ಅನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಯೋಜನೆಯಲ್ಲಿ 1ನೇ ತರಗತಿಗೆ ದಾಖಲಾಗುವ ಮಗುವಿನ ಹೆಸರಿನಲ್ಲಿ ಒಂದು ಸಾವಿರ ರೂಪಾಯಿಯನ್ನು ಎಫ್ ಡಿ ಇಡಲಾಗುತ್ತದೆ. ಪ್ರಮುಖವಾಗಿ ಶಾಲಾ ದಾಖಲಾತಿಯು ಹೆಚ್ಚಳವಾಗಲಿ ಎಂಬ ಪ್ರಮುಖವಾದ ಕಾರಣ ದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಯಿತು. ನಂತರ ಮಾತನಾಡಿದ ಅಭಿನಂದನ್ ಇವರು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಪಾಲಕರು ಮಕ್ಕಳು ಹಾಗೂ ಊರಿನವರು ಒಟ್ಟಿಗೆ ಶಾಲೆಯಲ್ಲಿ ನಡೆಸುವ ಕಾರ್ಯವು ಶ್ಲಾಘನೀಯವಾಗಿದ್ದು, ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಹಾಗೂ ಶಾಲೆಯಲ್ಲಿ ವಿದ್ಯಾಸಿರಿ ಯೋಜನೆಯಲ್ಲಿ ಮುಂದಿನ ವರ್ಷ ಇನ್ನೂ ಹೆಚ್ಚಿನ ಮಕ್ಕಳು ಫಲಾನುಭವಿಗಳಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡ ಊರಿನ ಹಿರಿಯರು ಹಾಗೂ ಸಾಧಕರಾದ ಪರಮೇಶ್ವರ್ ಶೆಟ್ಟಿ ಇವರನ್ನು ಸರ್ವರ ಪರವಾಗಿ ಗುರುತಿಸಿ , ಸನ್ಮಾನಿಸಲಾಯಿತು. ‌ ಶಿಕ್ಷಕರಾದ ವಿಕಾಸ್ ಕುಮಾರ್ ಇವರು ಆಗಮಿಸಿದ್ದ ಪಾಲಕರಿಗೆ ಶಾಲೆಯ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ವಿವಿಧ ಪ್ರಶ್ನೆಗಳನ್ನು ಹಾಗೂ ಶ್ರೀಮತಿ ಲೋಕೇಶ್ವರಿ ಇವರು ತುಳು ಗಾದೆ ಮಾತುಗಳನ್ನು ಪೂರ್ಣಗೊಳಿಸಲು ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ವಿ ಜೆ ಇವರು ಆಟಿದೊಂಜಿ ದಿನ ಕಾರ್ಯಕ್ರಮದ ಮಹತ್ವ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾದ, ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡರು. ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ನೋಣಯ್ಯ ಗೌಡ ಇವರು ಸ್ಟೇಜನ್ನು ಇಷ್ಟು ಸುಂದರವಾಗಿ ಅಲಂಕರಿಸಿದ ಮಕ್ಕಳು ಶಿಕ್ಷಕರು ವಂದನೆಗಳನ್ನು ತಿಳಿಸಿದರು. ಹಾಗೂ ಈ ಕಾರ್ಯಕ್ರಮಕ್ಕೆ ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ತಿಂಡಿ ತಿನಿಸುಗಳನ್ನು ತಂದ ಎಲ್ಲಾ ಪಾಲಕರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ 8ನೇ ತರಗತಿಯ ನವ್ಯಶ್ರೀ ಬಳಗದವರು ಪ್ರಾರ್ಥಿಸಿದರೆ, ಶ್ರೀಮತಿ ಪ್ರಮೀಳಾ ಸ್ವಾಗತಿಸಿದರು ಹಾಗೂ ಶ್ರೀಮತಿ ಹರಿತಾ ಸನ್ಮಾನಿತರನ್ನು ಪರಿಚಯಿಸಿದರು ಹಾಗೂ ಶ್ರೀಮತಿ ನಿಶ್ಮಿತಾ ಇವರು ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಶ್ರೀಮತಿ ಲೋಕೇಶ್ವರಿ ನಿರೂಪಿಸಿದರು.

Leave a Comment

error: Content is protected !!