ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಒತ್ತಾಯ: ಸೆ.3: ಬೆಳ್ತಂಗಡಿಯಲ್ಲಿ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಕು.ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹಿಸಿ ಸೆ.3ರಂದು ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪ್ರಭುತ್ವ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.


ಅವರು ಆ.16 ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು ಸುಮಾರು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ, ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ನಿಜ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡಲು ಸಂಬಂದ ಪಟ್ಟ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.


ಅತ್ಯಾಚಾರಿಗಳ ಕ್ರೂರ ಅಟ್ಟಹಾಸಕ್ಕೆ ಬಲಿಯಾದ ನಮ್ಮ ಮನೆಯ ಹೆಣ್ಣು ಮಗಳಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯಾ ಎಂದು ಪ್ರಶ್ನಿಸಬೇಕಾಗಿದೆ. ಉಳ್ಳವರಿಗೆ ಮಾತ್ರ ಸ್ವಾತಂತ್ರ್ಯ, ದೀನರಿಗೆ, ಕೂಲಿ ಕಾರ್ಮಿಕರಿಗೆ, ಮಾಧ್ಯಮ ವಗ೯ದವರಿಗೆ ಸ್ವಾತಂತ್ರ್ಯ ಇಲ್ಲ . ನ್ಯಾಯ ದೇವತೆಗಳು ಪ್ರಜೆಗಳು, ಪ್ರಜೆಗಳ ಮೂಲಕ ನ್ಯಾಯ ಸಿಗುತ್ತದೆ. ಅದಕ್ಕಾಗಿ ಲಕ್ಷಾಂತರ ಜನ ಬರಬೇಕು ಎಂದು ಹೇಳಿದರು.


ಘಟನೆ ನಡೆದ ಸಮಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐ ಡಿ ಮತ್ತು ದೇಶದ ಅತ್ಯುತ್ತಮ ತನಿಖಾ ಸಂಸ್ಥೆಯಾದ ಸಿಬಿಐ ಕೂಡ ನಿಜವಾದ ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದು ನಿರಪರಾಧಿ ಸಂತೋಷ್ ರಾವ್ ಮೇಲೆ ಸುಳ್ಳು ಆರೋಪವನ್ನು ಕೂಲಂಕುಷವಾಗಿ ಪರಿಶೀಲಿಸಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನಿರಾಪರಾಧಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಸಂದರ್ಭದಿಂದ ನಿಜವಾದ ಅರೋಪಿಗಳ ಪತ್ತೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ನ್ಯಾಯಾಂಗದ ಸುಪರ್ದಿಯಲ್ಲಿ ವಿಷೇಶ ತನಿಖಾ ತಂಡದ ಮುಖಾಂತರ ತನಿಖೆ ನಡೆಸಿ ಸೌಜನ್ಯ ಅತ್ಯಾಚಾರ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಯಾಗಬೇಕು ಎಂದು ಒತ್ತಾಯಿಸಿದರು.


ಕಳೆದ 11 ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದು ನಮ್ಮ ಹೋರಾಟಕ್ಕೆ ಶಕ್ತಿ ಬಂದಿದೆ.ಶೇ.77 ಜನ ಸೌಜನ್ಯ ಪರ, ನ್ಯಾಯದ ಪರ ಇದ್ದಾರೆ.
ನಾವು ಯಾರನ್ನೂ ಅವಹೇಳನ ಮಾಡುವುದು ಇಲ್ಲ, ನಮ್ಮ ಪ್ರತಿಭಟನೆಗೆ ಬರಲು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಸತ್ಯದ ಹೋರಾಟಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಬರಬೇಕು. ಸೌಜನ್ಯಳಿಗೆ ನ್ಯಾಯ ಸಿಗಲು, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದ ಹೋರಾಟ ನಡೆಯಲಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ವೇದಿಕೆಯ ಕಾಯ೯ದಶಿ೯ ಹರೀಶ್, ಮನೋಜ್ ಕುಂಜಪ೯, ಹರೀಶ್ ಕುಮಾರ್ ಬರಮೇಲು , ಪ್ರಜ್ವಲ್ ಗೌಡ ‌ಉಪಸ್ಥಿತರಿದ್ದರು.

Leave a Comment

error: Content is protected !!